ನವದೆಹಲಿ: ಅಗ್ನಿಪಥ ಯೋಜನೆಯನ್ನು ರಾಜಕೀಯಕರಣಗೊಳಿಸದಂತೆ ಚುನಾವಣಾ ಆಯೋಗವು ನಮ್ಮ ಪಕ್ಷಕ್ಕೆ(ಕಾಂಗ್ರೆಸ್) ನೀಡಿರುವ ನಿರ್ದೇಶನ ತಪ್ಪು ಎಂದು ಕಾಂಗ್ರೆಸ್ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಸರ್ಕಾರದ ನೀತಿಗಳನ್ನು ಟೀಕಿಸುವುದು ವಿಪಕ್ಷದ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.
ಜಾತಿ, ಸಮುದಾಯ, ಭಾಷೆ ಮತ್ತು ಧರ್ಮದ ಆಧಾರದ ಮೇಲೆ ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬುಧವಾರ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಅಲ್ಲದೆ, ಭದ್ರತಾ ಪಡೆಗಳ ವಿಚಾರಗಳನ್ನು ರಾಜಕೀಯಕರಣಗೊಳಿಸಬೇಡಿ. ಶಸ್ತ್ರಸ್ತ ಪಡೆಯ ಸಾಮಾಜಿಕ–ಆರ್ಥಿಕ ಸಂಯೋಜನೆ ಕುರಿತಾದ ಇಬ್ಭಾಗಿಸುವ ಹೇಳಿಕೆಗಳನ್ನು ನೀಡಬೇಡಿ ಎಂದು ಕಾಂಗ್ರೆಸ್ಗೆ ಸೂಚಿಸಿತ್ತು. ಈ ಸಂದರ್ಭ ಅಗ್ನಿಪಥ ಕುರಿತಾಗಿ ಕಾಂಗ್ರೆಸ್ ನಾಯಕರೊಬ್ಬರು ನೀಡಿದ್ದ ಹೇಳಿಕೆಯನ್ನು ಆಯೋಗ ಉಲ್ಲೇಖಿಸಿತ್ತು.
‘ಚುನಾವಣಾ ಆಯೋಗದ ರಾಜಕೀಯಕರಣದ ಅರ್ಥವೇನು? ಸರ್ಕಾರದ ನೀತಿಯಿಂದ ಜಾರಿಯಾಗಿರುವ ಅಗ್ನಿವೀರ್ ಯೋಜನೆಯನ್ನು ಟೀಕಿಸುವುದೇ ರಾಜಕೀಯಕರಣ ಎಂದರ್ಥವೇ? ಸರ್ಕಾರದ ನೀತಿಗಳನ್ನು ಟೀಕಿಸುವುದು ಮತ್ತು ಅಧಿಕಾರಕ್ಕೆ ಬಂದರೆ ಆ ಯೋಜನೆಯನ್ನು ರದ್ದು ಮಾಡುವುದಾಗಿ ಹೇಳುವುದು ಪ್ರತಿಪಕ್ಷದ ಹಕ್ಕು’ಎಂದಿದ್ದಾರೆ.
ದೇಶಕ್ಕಾಗಿ ಒಟ್ಟಿಗೆ ಹೋರಾಡುವ ಯೋಧರಲ್ಲಿ ಅಗ್ನಿವೀರ್ ಯೋಜನೆ ಎರಡು ವಿಭಾಗ ಸೃಷ್ಟಿಸಿದೆ.
‘ಅಗ್ನಿವೀರ್ ಯೋಜನೆಯಡಿ 4 ವರ್ಷಕ್ಕೆ ನೇಮಕಗೊಂಡ ಯೋಧನನ್ನು ಅವಧಿ ಮುಗಿದ ಬಳಿಕ ಉದ್ಯೋಗ, ಪಿಂಚಣಿ ಇಲ್ಲದೆ ಕಳುಹಿಸಲಾಗುತ್ತದೆ. ಇದು ತಪ್ಪು’ ಎಂದಿದ್ದಾರೆ.
'ಅಗ್ನಿವೀರ್ ಯೋಜನೆಯನ್ನು ಸೇನೆಯೇ ವಿರೋಧಿಸಿದೆ. ಆದರೂ ಯೋಜನೆಯ ಬಗ್ಗೆ ಸರ್ಕಾರದ ದಾಹ ತಪ್ಪು. ಹಾಗಾಗಿ, ಅಗ್ನಿವೀರ್ ಯೋಜನೆ ರದ್ದಾಗಬೇಕು’ ಎಂದು ಹೇಳಿದ್ದಾರೆ.
'ಈ ಬಗ್ಗೆ ಚುನಾವಣಾ ಆಯೋಗ ನೀಡಿರುವ ನಿರ್ದೇಶನ ತುಂಬಾ ದೊಡ್ಡ ತಪ್ಪು. ದೇಶದ ಒಬ್ಬ ನಾಗರಿಕನಾಗಿ ಅದು ತಪ್ಪು ಎಂದು ಹೇಳುವ ಹಕ್ಕು ನನಗಿದೆ’ ಎಂದು ಚಿದಂಬರಂ ಹೇಳಿದ್ದಾರೆ.