ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌: ಎಸ್‌ಬಿಐನಿಂದ ‘ಉದ್ದೇಶಪೂರ್ವಕ ಅಸಹಕಾರ’- ಸಿಪಿಎಂ

ಸುಪ್ರೀಂ ಕೋರ್ಟ್‌ನ ಮೊರೆಹೊಕ್ಕ ಸಿಪಿಎಂ
Published 10 ಮಾರ್ಚ್ 2024, 15:05 IST
Last Updated 10 ಮಾರ್ಚ್ 2024, 15:05 IST
ಅಕ್ಷರ ಗಾತ್ರ

ನವದೆಹಲಿ: ‘ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪಾಲಿಸದೆ ನ್ಯಾಯಾಂಗ ನಿಂದನೆ ಎಸಗಿದೆ’ ಎಂದು ಸಿಪಿಎಂ ನ್ಯಾಯಾಲಯದ ಮೊರೆಹೊಕ್ಕಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಪಾಲಿಸದ ಎಸ್‌ಬಿಐ ‘ಉದ್ದೇಶಪೂರ್ವಕ ಅವಿಧೇಯತೆ’ ತೋರುತ್ತಿದೆ ಎಂದು ತಾನು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಉಲ್ಲೇಖಿಸಿದೆ.

‘ಬಾಂಡ್‌ಗಳನ್ನು ಖರೀದಿಸಿದವರು ಮತ್ತು ಅದನ್ನು ಮಾರಿಕೊಂಡವರ ಬಗ್ಗೆ ಮಾಹಿತಿ ಹೊಂದಿಸುವ ಪ್ರಕ್ರಿಯೆಯಲ್ಲಿ ಹಲವು ತೊಂದರೆಗಳಿವೆ ಎಂದು ಹೇಳುವ ಮೂಲಕ ಎಸ್‌ಬಿಐ, ಸುಪ್ರೀಂ ಕೋರ್ಟ್‌ನ ಸೂಚನೆಯನ್ನು ಉದ್ದೇಶ‍ಪೂರ್ವಕವಾಗಿ ತಿರುಚಿ ಹೇಳುತ್ತಿದೆ’ ಎಂದು ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಪಕ್ಷದ ಪರವಾಗಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನೀಡಿದ್ದ ಗಡುವು ಮುಗಿಯುವ ಎರಡು ದಿನ ಮುನ್ನ ತನಗಿರುವ ತೊಂದರೆಗಳನ್ನು ಉಲ್ಲೇಖಿಸಿದ ಎಸ್‌ಬಿಐ, ಜೂನ್‌ 30ರವರೆಗೂ ವಿವರ ಒದಗಿಸಲು ಸಮಯ ವಿಸ್ತರಿಸುವಂತೆ ಕೋರಿದೆ.

‘ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನ ದಾನಿಗಳ ವಿವರ ಮತ್ತು ದೇಣಿಗೆ ಮೊತ್ತವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ನೋಡಿಕೊಳ್ಳುವುದೇ ಎಸ್‌ಬಿಐನ ಪ್ರಯತ್ನವಾಗಿದೆ’ ಎಂದು ಈ ಪ್ರಕರಣದ ಪ್ರಮುಖ ಅರ್ಜಿದಾರ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆಯು ಸುಪ್ರೀಂ ಕೋರ್ಟ್‌ನ ಮೊರೆಹೊಕ್ಕಿದೆ.

ಸಮಯ ವಿಸ್ತರಿಸುವಂತೆ ಎಸ್‌ಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನಡೆಯಲಿದೆ. ಇದೇ ಸಂದರ್ಭ ನ್ಯಾಯಾಂಗ ನಿಂದನೆಯ ಅರ್ಜಿಗಳ ವಿಚಾರಣೆಯೂ ನಡೆಯುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT