ನವದೆಹಲಿ: ಸಶಕ್ತ ನ್ಯಾಯಾಂಗ ವ್ಯವಸ್ಥೆಯು ‘ವಿಕಸಿತ ಭಾರತ'ದ ಒಂದು ಭಾಗವಾಗಿದೆ. ವಿಶ್ವಾಸಾರ್ಹ ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಲು ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾನುವಾರ(ಇಂದು) ಸುಪ್ರೀಂ ಕೋರ್ಟ್ನ 75ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನ್ ವಿಶ್ವಾಸ್ ಮಸೂದೆಯು ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಭವಿಷ್ಯದಲ್ಲಿ ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ಅನಗತ್ಯ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದರು.
ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ಸರ್ಕಾರ ಕಾನೂನುಗಳನ್ನು ಆಧುನೀಕರಿಸುತ್ತಿದೆ. ಈ ನಿಟ್ಟಿನಲ್ಲಿ ಮೂರು ಹೊಸ ಕ್ರಿಮಿನಲ್ ಮಸೂದೆಗಳನ್ನು ಜಾರಿಗೊಳಿಸುವುದರೊಂದಿಗೆ ಭಾರತದ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗಳು ಹೊಸ ಯುಗವನ್ನು ಪ್ರವೇಶಿಸಿವೆ ಎಂದು ಪ್ರಧಾನಿ ಹೇಳಿದರು.
ಸರ್ವೋಚ್ಚ ನ್ಯಾಯಾಲಯ ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಿದೆ. ವೈಯಕ್ತಿಕ ಹಕ್ಕುಗಳು, ವಾಕ್ ಸ್ವಾತಂತ್ರ್ಯದ ಕುರಿತು ಅನೇಕ ಮಹತ್ವದ ತೀರ್ಪುಗಳನ್ನು ನೀಡಿದೆ. ಇದು ದೇಶದ ಸಾಮಾಜಿಕ-ರಾಜಕೀಯ ಪರಿಸರಕ್ಕೆ ಹೊಸ ಆಯಾಮ ನೀಡಿದೆ ಎಂದೂ ಅವರು ಹೇಳಿದರು.
ಭಾರತದ ಇಂದಿನ ಆರ್ಥಿಕ ನೀತಿಗಳು ನಾಳಿನ ಉಜ್ವಲ ಭಾರತಕ್ಕೆ ಅಡಿಪಾಯವನ್ನು ರೂಪಿಸುತ್ತವೆ. ಅಲ್ಲದೇ ಇಂದು ರಚಿಸಿದ ಕಾನೂನುಗಳು ಭಾರತದ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.