ಭೋಪಾಲ್ (ಮಧ್ಯಪ್ರದೇಶ): ಅರಣ್ಯ ಇಲಾಖೆಯ ಮಾಜಿ ಸಚಿವ ವಿಜಯ್ ಶಾ ಅವರು ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿ, ಮೋಜು ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲಾಖೆಯು ಈ ಕುರಿತು ತನಿಖೆಗೆ ಆದೇಶಿಸಿದೆ.
ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಜಯ್ ಅವರು ಮೋಜು ನಡೆಸಿದ್ದಾರೆ ಎಂದು ವನ್ಯಜೀವಿ ಕಾರ್ಯಕರ್ತರೊಬ್ಬರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ವಿಜಯ್ ಹಾಗೂ ಅವರ ಸ್ನೇಹಿತರು ನರ್ಮದಾಪುರಂ ಜಿಲ್ಲೆಯ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೋಜು ನಡೆಸಿ, ಕೋಳಿ ಖಾದ್ಯ ಬೇಯಿಸಿ ತಿಂದಿದ್ದಾರೆ ಎನ್ನಲಾದ ವಿಡಿಯೊವೊಂದು ಹರಿದಾಡುತ್ತಿದೆ.
ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ನಿಷಿದ್ಧ. ಮಾಜಿ ಸಚಿವರ ವರ್ತನೆಯಿಂದ ಕಾಡಿನಲ್ಲಿರುವ ಪ್ರಾಣಿಗಳಿಗೆ ತೊಂದರೆಯಾಗಿದೆ. ವನ್ಯಜೀವಿ ಕಾಯ್ದೆಯಡಿ ಇದು ಅಪರಾಧ ಎಂದು ವನ್ಯಜೀವಿ ಕಾರ್ಯಕರ್ತ ಹಾಗೂ ಆರ್ಟಿಐ ಕಾರ್ಯಕರ್ತ ಅಜಯ್ ದುಬೆ ಅವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ದೂರು ನೀಡಿದ್ದರು.
ದೂರು ಆಧರಿಸಿ ತನಿಖೆಗೆ ಅದೇಶಿಸಲಾಗಿದೆ.