ರಾಜಕೋಟ್: ಮೇ 25ರಂದು ಗುಜರಾತ್ನ ರಾಜಕೋಟ್ನ ಟಿಆರ್ಪಿ ಗೇಮ್ ಜೋನ್ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪಟ್ಟಣ ಯೋಜನಾ ಅಧಿಕಾರಿ(ಪಿಟಿಒ) ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಟಿಪಿಒ ಎಂಡಿ ಸಂಗತಿಯಾ, ಸಹಾಯಕ ಟಿಪಿಒಗಳಾದ ಮುಕೇಶ್ ಮಕ್ವಾನಾ, ಗೌತಮ್ ಜೋಶಿ ಮತ್ತು ಕಾಲವಾಡ್ ಅಗ್ನಿಶಾಮಕ ಕೇಂದ್ರದ ಮಾಜಿ ಅದಿಕಾರಿ ರೋಹಿತ್ ವಿಗೋರಾರನ್ನು ಬಂಧಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 9ಕ್ಕೆ ಏರಿದೆ.
ನಾಲ್ವರು ಅಧಿಕಾರಿಗಳ ಬಂಧನವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ವಿಕಾಸ್ ಸಹಾಯ್ ಖಚಿತಪಡಿಸಿದ್ದಾರೆ.
ಅಗತ್ಯ ಅನುಮತಿ ಪಡೆಯದೆ ಗೇಮ್ ಜೋನ್ ಆರಂಭಕ್ಕೆ ಅವಕಾಶ ಕೊಟ್ಟ ಕರ್ತವ್ಯ ಲೋಪದ ಆರೋಪದಡಿ 9 ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ಎಸ್ಐಟಿ ಮುಖ್ಯಸ್ಥ ಹಿರಿಯ ಐಪಿಎಸ್ ಅಧಿಕಾರಿ ಸುಭಾಷ್ ತ್ರಿವೇದಿ, ಅಗ್ನಿಶಾಮಕ ದಳದ ಮಾಜಿ ಅಧಿಕಾರಿಯನ್ನು 3 ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ.