ಕೋಲ್ಕತ್ತ: ಹಿಂಸಾಚಾರಪೀಡಿತ ಸಂದೇಶ್ಖಾಲಿಯಲ್ಲಿ ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಸಹೋದರ ಸಿರಾಜ್ ವಿರುದ್ಧ ಗ್ರಾಮಸ್ಥರು ಗುರುವಾರ ಮತ್ತೆ ಪ್ರತಿಭಟನೆ ನಡೆಸಿದ್ದಾರೆ.
ಶೇಖ್ ಹಾಗೂ ಬೆಂಬಲಿಗರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಕಾರರು, ಸಿರಾಜ್ ಅವರಿಗೆ ಸೇರಿದ ಗುಡಿಸಲಿಗೆ ಬೆಂಕಿ ಹಚ್ಚಿದರು.
ಆರೋಪಿಗಳು ಕಬಳಿಸಿರುವ ನಮ್ಮ ಭೂಮಿಯನ್ನು ವಾಪಸ್ ನೀಡಿ ಎಂದು ಒತ್ತಾಯಿಸಿದರು.
ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂದೇಶ್ಖಾಲಿಗೆ ಬುಧವಾರ ಭೇಟಿ ನೀಡಿದ್ದ ಡಿಜಿಪಿ ರಾಜೀವ್ ಕುಮಾರ್ ಅವರು ಭರವಸೆ ನೀಡಿದ್ದರು. ದೂರು ದಾಖಲಿಸಿ, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಎಂದು ಗ್ರಾಮಸ್ಥರಿಗೆ ಸೂಚಿಸಿದ್ದರು.
ಹಿಂಸಾಚಾರಪೀಡಿತ ಪ್ರದೇಶದಲ್ಲಿ ಬುಧವಾರ ವಾಸ್ತವ್ಯ ಹೂಡಿದ್ದ ಅವರು, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದರು.
ಹಿಂಸಾಚಾರಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಉತ್ತರ 24 ಪರಗಣ ಜಿಲ್ಲೆಯ ಟಿಎಂಸಿ ನಾಯಕರು, ಸ್ಥಳೀಯರ ಆಕ್ರೋಶಕ್ಕೆ ಗುರಿಯಾದರು.
‘ಸಂದೇಶ್ಖಾಲಿಯಲ್ಲಿ ತಪ್ಪು ನಡೆದಿದೆ. ಆದರೂ ಅಲ್ಲಿನ ಜನರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಸಂಪೂರ್ಣ ವಿಶ್ವಾಸವಿರಿಸಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು’ ಎಂದು ಟಿಎಂಸಿ ಮುಖಂಡ ಹಾಗೂ ಸಂದೇಶ್ಖಾಲಿ ಶಾಸಕ ಸುಕುಮಾರ್ ಮಹತೊ ಹೇಳಿದರು.
ಮಾ.6ರಂದು ಪ್ರಧಾನಿ ರ್ಯಾಲಿ:
ಉತ್ತರ 24 ಪರಗಣ ಜಿಲ್ಲೆಯ ಬಾರಾಸಾತ್ನಲ್ಲಿ ಮಾರ್ಚ್ 6ರಂದು ಹಮ್ಮಿಕೊಂಡಿರುವ ಮಹಿಳಾ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವರು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ತಿಳಿಸಿದರು.
ಸಂದೇಶಖಾಲಿಯಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರು ಮೋದಿ ಅವರನ್ನು ಭೇಟಿಯಾಗಲು ಬಯಸಿದರೆ, ಅದಕ್ಕೆ ಬೇಕಾದ ಏರ್ಪಾಡು ಮಾಡಲಾಗುವುದು ಎಂದರು.