ಬಜೆಟ್ ಮಂಡನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ರೈತರ ಪ್ರತಿಭಟನೆಗೆ ಚರ್ಚೆ ಒಂದೇ ಪರಿಹಾರ. ಸರ್ಕಾರ ಚರ್ಚೆಗೆ ಸಿದ್ಧವಿದೆ. ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನವೇ ಪ್ರಧಾನಿ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಈಗಲೂ ಅವರು ಚರ್ಚೆಗೆ ಬರಬಹುದು. ರೈತರ ಯಾವುದೇ ಪ್ರಶ್ನೆಗೆ ಉತ್ತರಿಸುವ ಅವಕಾಶವನ್ನು ಕೃಷಿ ಸಚಿವರು ಎಂದೂ ನಿರಾಕರಿಸಿಲ್ಲ‘ ಎಂದು ಹೇಳಿದ್ದಾರೆ.
ಈ ಮಧ್ಯೆ, ದೆಹಲಿ ಗಡಿಯಲ್ಲಿ ರೈತ ಪ್ರತಿಭಟನೆ ಮುಂದುವರೆದಿದ್ದು, ಪಶ್ಚಿಮ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಾಲ್ಕನೇ ರೈತ ಮಹಾಪಂಚಾಯತ್ ನಡೆದಿದೆ. ಕಳೆದ ವರ್ಷ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ಹಿಂಪಡೆತಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಲು ನಿರ್ಧರಿಸಲಾಗಿದೆ.