ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ನ ಸಹ ಸಂಸ್ಥಾಪಕ ಅಬ್ದುಲ್ ಸುಭಾನ್ ಖುರೇಶಿಗೆ ದೆಹಲಿ ಹೈಕೋರ್ಟ್ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಜಾಮೀನು ಮಂಜೂರು ಮಾಡಿದೆ.
ಖುರೇಶಿ ಜೈಲಿನಲ್ಲಿ ಕಳೆದಿರುವ ಸರಿಸುಮಾರು ಐದು ವರ್ಷಗಳ ಅವಧಿಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈತ್ ಮತ್ತು ಮನೋಜ್ ಜೈನ್ ಅವರು ಇದ್ದ ವಿಭಾಗೀಯ ಪೀಠವು, ಜಾಮೀನಿನ ಷರತ್ತುಗಳನ್ನು ವಿಚಾರಣಾ ನ್ಯಾಯಾಲಯ ತೀರ್ಮಾನಿಸಲಿದೆ ಎಂದು ಹೇಳಿತು.
‘ವಿಚಾರಣಾ ನ್ಯಾಯಾಲಯ ವಿಧಿಸುವ ಯಾವುದೇ ಷರತ್ತುಗಳ ಉಲ್ಲಂಘನೆ ಆದಲ್ಲಿ, ಖುರೇಶಿ ಯಾವುದೇ ಸಾಕ್ಷಿಯನ್ನು ಬೆದರಿಸಲು ಅಥವಾ ಅವರ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ, ವಿಚಾರಣೆಯನ್ನು ವಿಳಂಬಗೊಳಿಸಲು ಯತ್ನಿಸಿದರೆ, ಜಾಮೀನು ರದ್ದು ಮಾಡುವಂತೆ ಕೋರುವ ಅಧಿಕಾರ ಪ್ರಾಸಿಕ್ಯೂಷನ್ಗೆ ಇರುತ್ತದೆ’ ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ವಿಚಾರಣಾ ನ್ಯಾಯಾಲಯವೊಂದು 2023ರ ಡಿಸೆಂಬರ್ನಲ್ಲಿ ತನ್ನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಖುರೇಶಿ ಹೈಕೋರ್ಟ್ ಮೊರೆಹೋಗಿದ್ದ.
ಖುರೇಶಿ, ಇಂಡಿಯನ್ ಮುಜಾಹಿದೀನ್ ಮತ್ತು ‘ಸ್ಟುಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ’ (ಸಿಮಿ) ಸಂಘಟನೆಯ ಸಕ್ರಿಯ ಸದಸ್ಯ ಆಗಿದ್ದ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.