ಮುಂಬೈ: ಎಲ್ಗರ್ ಪರಿಷತ್– ಮಾವೋವಾದಿಗಳ ಜೊತೆಗಿನ ಸಂಪರ್ಕ ಪ್ರಕರಣದಲ್ಲಿ ಬಂಧಿತರಾಗಿದ್ದ ಗೌತಮ್ ನವಲಖಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ನ್ಯಾಯಮೂರ್ತಿ ಎ.ಎಸ್ ಗಡ್ಕರಿ ಅವರಿದ್ದ ವಿಭಾಗೀಯ ಪೀಠ, ನವಲಖಾ ಅವರಿಗೆ ಜಾಮೀನು ಮಂಜೂರು ಮಾಡಲಾಗುವುದು. ಆದರೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಸಲು ಮುಂದಾಗಿರುವ ಎನ್ಐಎ, ಆರು ವಾರಗಳ ಕಾಲ ತಡೆ ಮುಂದುವರಿಸುವಂತೆ ಕೋರಿದೆ. ಆದರೆ ಈ ಪೀಠವು ಅದನ್ನು ಮೂರು ವಾರಗಳಿಗೆ ಸೀಮಿತಗೊಳಿಸಿದೆ ಎಂದು ಹೇಳಿದೆ.
ನವಲಖಾ ಅವರಿಗೆ ₹1 ಲಕ್ಷ ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ.
ನವಲಖಾ ಅವರು ಪ್ರಕರಣದ 7ನೇ ಆರೋಪಿಯಾಗಿದ್ದು, ಕಳೆದ ಏಪ್ರಿಲ್ನಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಏನಿದು ಪ್ರಕರಣ:
2017ರ ಡಿಸೆಂಬರ್ 31ರಂದು ಪುಣೆಯಲ್ಲಿ ಎಲ್ಗಾರ್ ಪರಿಷತ್ ಸಭೆ ನಡೆದಿದ್ದು, ಈ ಸಭೆಗೆ ಮಾವೋವಾದಿಗಳು ಹಣಕಾಸು ನೆರವು ನೀಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಸಭೆಯಲ್ಲಿ ಮಾಡಲಾಗಿದ್ದ ಪ್ರಚೋದನಕಾರಿ ಭಾಷಣದಿಂದಾಗಿ ಭೀಮಾ–ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಮಾರನೆ ದಿನ ಹಿಂಸಾತ್ಮಕ ಕೃತ್ಯಗಳು ನಡೆದಿದ್ದವು ಎಂದೂ ಅವರು ತಿಳಿಸಿದ್ದರು.
ಎಲ್ಗರ್ ಪರಿಷತ್ ಸಂಸ್ಥೆಯ ಹಣಕಾಸು ನಿರ್ವಹಣೆಯಲ್ಲಿ ಗೋನ್ಸಾಲ್ವೇಸ್ ಮತ್ತು ಫೆರೀರಾ ಪ್ರಮುಖ ಪಾತ್ರ ವಹಿಸಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಕ್ಕೆ ಸಂಬಂಧಿಸಿದಂತೆ 2018ರಲ್ಲಿ ಇವರಿಬ್ಬರನ್ನು ಬಂಧಿಸಲಾಗಿತ್ತು.
ನವಲಖಾ ಅವರನ್ನು 2018 ಆಗಸ್ಟ್ 28ರಂದು ಬಂಧಿಸಲಾಗಿತ್ತು. ಪ್ರಾರಂಭದಲ್ಲಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ನಂತರ ಅವರನ್ನು ತಲೋಜಾ ಕಾರಾಗೃಹದಲ್ಲಿ ಇರಿಸಲಾಯಿತು.