ನವದೆಹಲಿ: ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ತಮಗೆ ನೀಡಲಾಗಿದ್ದ ನೋಟಿಸ್ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲು ಟಿಎಂಸಿಯ ಉಚ್ಚಾಟಿತ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ದೆಹಲಿ ಹೈಕೋರ್ಟ್ ಒಪ್ಪಿಗೆ ನೀಡಿದೆ.
ಸಂಸತ್ ಸದಸ್ಯತ್ವದಿಂದ ಉಚ್ಚಾಟನೆಗೊಂಡ ಮಹುವಾ ಅವರಿಗೆ ಬಂಗಲೆ ಖಾಲಿ ಮಾಡುವಂತೆ ಸೂಚಿಸಿ ಡೈರೆಕ್ಟೊರೇಟ್ ಆಫ್ ಎಸ್ಟೇಟ್ (ಡಿಒಇ) ನೋಟಿಸ್ ನೀಡಿತ್ತು. ಇದರ ವಿರುದ್ಧ ಮಹುವಾ ಅವರು ನ್ಯಾಯಾಲಯದ ಮೊರೆಹೋಗಿದ್ದರು.
ಆದರೆ, ಈಗಾಗಲೇ ಮಹುವಾ ಅವರು ಬಂಗಲೆಯನ್ನು ಖಾಲಿ ಮಾಡಿದ್ದರಿಂದಾಗಿ ಈ ಅರ್ಜಿ ನಿರರ್ಥಕ ಎಂದು ಅವರ ಪರ ವಕೀಲರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅರ್ಜಿ ವಾಪಸ್ ಪಡೆಯಲು ಹೈಕೋರ್ಟ್ ಒಪ್ಪಿಗೆ ನೀಡಿತು.
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಉಡುಗೊರೆ ಮತ್ತು ಹಣ ಪಡೆದಿದ್ದಾರೆ ಎಂಬ ಆರೋಪದಡಿ ಮಹುವಾ ಅವರು ಕಳೆದ ವರ್ಷದ ಡಿಸೆಂಬರ್ 8ರಂದು ಲೋಕಸಭೆಯಿಂದ ಉಚ್ಚಾಟನೆಯಾಗಿದ್ದರು. ಆ ಬಳಿಕ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಸೂಚಿಸಲಾಗಿತ್ತು.