ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ ಹಣಕಾಸು ಮಸೂದೆ ಮಂಡನೆ ವೇಳೆ ಸರ್ಕಾರದ ಪರ ಮತದಾನ ಮಾಡಬೇಕೆಂಬ ಪಕ್ಷದ ವಿಪ್ ಉಲ್ಲಂಘಿಸಿದ್ದ ಕಾಂಗ್ರೆಸ್ ಪಕ್ಷದ 6 ಮಂದಿ ಶಾಸಕರನ್ನು ಸಭಾಧ್ಯಕ್ಷ ಕುಲದೀಪ್ ಸಿಂಗ್ ಪಟಾನಿಯಾ ಅನರ್ಹಗೊಳಿಸಿದ್ದಾರೆ.
ರಾಜಿಂದರ್ ಸಿಂಗ್ ರಾಣಾ, ಸುಧೀರ್ ಶರ್ಮಾ, ಇಂದೇರ್ ದತ್ ಲಖನ್ಪಾಲ್, ದೇವಿಂದರ್ ಕುಮಾರ್ ಭುಟೂ, ರವಿ ಠಾಕೂರ್ ಮತ್ತು ಚೈತನ್ಯ ಶರ್ಮಾ ಅನರ್ಹಗೊಂಡ ಶಾಸಕರು.
ಬುಧವಾರ ಅನಹರ್ತೆಯ ಆದೇಶವನ್ನು ಕಾಯ್ದಿರಿಸಿದ್ದ ಸ್ಪೀಕರ್, ಶಾಸಕರು ಕಾಂಗ್ರೆಸ್ ಪಕ್ಷದ ಚಿಹ್ನೆ ಮೇಲೆ ಗೆದ್ದು ಪಕ್ಷದ ವಿಪ್ ಉಲ್ಲಂಘಿಸಿರುವುದು ಪಕ್ಷಾಂತರ ವಿರೋಧಿ ಕಾಯ್ದೆ ಅಡಿ ಬರುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
'ಈ ಶಾಸಕರು ಅನರ್ಹಗೊಂಡಿದ್ದಾರೆ. ಹಿಮಾಚಲ ಪ್ರದೇಶದ ವಿಧಾನಸಭೆಯ ಶಾಸಕ ಸ್ಥಾನವನ್ನು ತಕ್ಷಣದಿಂದಲೇ ಕಳೆದುಕೊಂಡಿದ್ದಾರೆ’ ಎಂದು ಸ್ಪೀಕರ್ ಆದದೇಶದಲ್ಲಿ ತಿಳಿಸಿದ್ದಾರೆ.
ಈ 6 ಶಾಸಕರು ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಪರವಾಗಿ ಅಡ್ಡ ಮತದಾನ ಮಾಡಿದ್ದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಮತದಾನದಿಂದ ದೂರ ಉಳಿದಿದ್ದರು.
ಬಿಜೆಪಿಯ 15 ಶಾಸಕರನ್ನು ಸ್ಪೀಕರ್ ಅಮಾನತು ಮಾಡಿದ ಬಳಿಕ ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ಹಣಕಾಸು ಮಸೂದೆ ಅಂಗೀಕಾರವಾಗಿತ್ತು.