ಬೇಗುಸರಾಯ್: ಹಿಂದೂಗಳು ಹಲಾಲ್ ಮಾಂಸವನ್ನು ತ್ಯಜಿಸಿ ಜಟ್ಕಾ ಮಾಂಸವನ್ನು ಮಾತ್ರ ಸೇವಿಸುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಲಾಲ್ ಪ್ರಮಾಣೀಕೃತ ಮಾಂಸವನ್ನು ಮಾತ್ರ ಸೇವಿಸುವ ಮುಸ್ಲಿಮರ ಬದ್ಧತೆಗೆ ನನ್ನ ಮೆಚ್ಚುಗೆಯಿದೆ. ಇದೇ ರೀತಿ ಹಿಂದೂಗಳು ತಮ್ಮ ರೂಢಿ ಸಂಪ್ರದಾಯಗಳನ್ನು ಅರಿತು ಬದ್ಧತೆಯಿಂದ ನಡೆದುಕೊಳ್ಳಬೇಕಿದೆ’ ಎಂದು ಹೇಳಿದರು.
‘ಜಟ್ಕಾ ಹಿಂದೂಗಳು ವಧೆ ಮಾಡುವ ವಿಧಾನವಾಗಿದೆ. ಹಿಂದೂಗಳು ಬಲಿಕೊಡುವಾಗ ಒಂದೇ ಹೊಡೆತದಲ್ಲಿ ಬಲಿಕೊಡುತ್ತಾರೆ. ಆದ್ದರಿಂದ ಹಿಂದೂಗಳು ಹಲಾಲ್ ಮಾಂಸಗಳನ್ನು ತಿಂದು ತಮ್ಮನ್ನು ತಾವು ಭ್ರಷ್ಟಗೊಳಿಸಿಕೊಳ್ಳಬಾರದು’ ಎಂದರು.
‘ಹಿಂದೂಗಳಿಗೆ ಪೂರಕವಾಗಿ ಜಟ್ಕಾ ಮಾಂಸ ಮಾತ್ರ ಮಾರಾಟ ಮಾಡುವ ಕಸಾಯಿಖಾನೆಗಳಿರುವ ಹೊಸ ಮಾದರಿಯ ಉದ್ಯಮವನ್ನು ಪ್ರಾರಂಭಿಸುವ ಅಗತ್ಯವಿದೆ’ ಎಂದು ಒತ್ತಿ ಹೇಳಿದರು.
ಒಂದು ವಾರದ ಹಿಂದೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದ ಸಿಂಗ್, ಉತ್ತರ ಪ್ರದೇಶ ಸರ್ಕಾರದ ನಿರ್ಧಾರದ ಹಾಗೆ ಬಿಹಾರ್ನಲ್ಲಿಯೂ ಹಲಾಲ್ ಎಂದು ಲೇಬಲ್ ಮಾಡಿದ ಆಹಾರ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ ಸಲಹೆ ನೀಡಿದ್ದರು.
ರಾಹುಲ್ ಗಾಂಧಿ ವಿರುದ್ಧ ಕಿಡಿ
ಭದ್ರತಾ ಲೋಪದ ಬಗ್ಗೆ ರಾಹುಲ್ ಗಾಂಧಿಯವರ ಪ್ರತಿಕ್ರಿಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಹುಲ್ ಗಾಂಧಿ ಅವರು 'ತುಕ್ಡೆ ತುಕ್ಡೆ' ಗ್ಯಾಂಗ್ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು ಇದೇ ಮೊದಲೆನಲ್ಲ. ಈ ಹಿಂದೆ ಜೆಎನ್ಯು ಕ್ಯಾಂಪಸ್ನಲ್ಲಿ ದೇಶದ್ರೋಹದ ಘೋಷಣೆಗಳನ್ನು ಕೂಗಿದವರಿಗೂ ರಾಹುಲ್ ಬೆಂಬಲ ನೀಡಿದ್ದರು’ ಎಂದು ಕಿಡಿಕಾರಿದರು.