ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ಅಧಿಸೂಚನೆಯನ್ನು ಖಂಡಿಸಿರುವ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಕೇಂದ್ರ ಸರ್ಕಾರವು ಐತಿಹಾಸಿಕ ಪ್ರಮಾದ ಎಸಗಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಯಾವಾಗಲೂ ರಾಜಕೀಯ ಲಾಭಕ್ಕಾಗಿ ಪ್ರಯತ್ನಿಸುತ್ತದೆ ಎಂದು ಟೀಕಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಸುಮ್ಮನಿದ್ದು, ಲೋಕಸಭೆ ಚುನಾವಣೆಗೂ ಮುನ್ನ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಜನರನ್ನು ಒಡೆಯುವ ಕೇಂದ್ರದ ಈ ಕ್ರಮವನ್ನು ಎಐಎಡಿಎಂಕೆ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
‘ಕೇಂದ್ರ ಸರ್ಕಾರವು ಇದರೊಂದಿಗೆ ಐತಿಹಾಸಿಕ ಪ್ರಮಾದವನ್ನು ಎಸಗಿದೆ. ಮುಸ್ಲಿಮರು ಮತ್ತು ಶ್ರೀಲಂಕಾ ತಮಿಳರು ಸೇರಿದಂತೆ ಸ್ಥಳೀಯ ಜನರ ವಿರುದ್ಧ ಇದನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನಕ್ಕೆ ಎಂದಿಗೂ ಎಐಎಡಿಎಂಕೆ ಅವಕಾಶ ಕೊಡುವುದಿಲ್ಲ. ಇದನ್ನು ಪ್ರಜಾಸತ್ತಾತ್ಮಕವಾಗಿ ವಿರೋಧಿಸಲು ಎಐಎಡಿಎಂಕೆ ದೇಶದ ಜನರೊಂದಿಗೆ ಸೇರಿಕೊಳ್ಳುತ್ತದೆ’ ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯು, 2014 ಡಿಸೆಂಬರ್ 31ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಾದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು ಅನುವು ಮಾಡಿಕೊಡುತ್ತದೆ.
ಸಿಎಎ ಕಾಯ್ದೆಯ ನಿಯಮಗಳನ್ನು ಜಾರಿ ಮಾಡಿ ಕೇಂದ್ರವು ಸೋಮವಾರ ಅಧಿಸೂಚನೆ ಹೊರಡಿಸಿದೆ.