ನವದೆಹಲಿ: ‘ಸುಪ್ರೀಂ ಕೋರ್ಟ್ನ ಕಟ್ಟಡ ಸಂಕೀರ್ಣದ ವಿಸ್ತರಣೆಗಾಗಿ ಕೇಂದ್ರ ಸರ್ಕಾರವು ₹ 800 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ’ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಹೇಳಿದರು.
ಸುಪ್ರೀಂ ಕೋರ್ಟ್ನ ವಜ್ರ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸುಲಲಿತ ನ್ಯಾಯವು ಪ್ರತಿಯೊಬ್ಬ ಭಾರತೀಯ ನಾಗರಿಕನ ಹಕ್ಕು. ಸುಪ್ರೀಂ ಕೋರ್ಟ್ ಇದನ್ನು ಒದಗಿಸುವ ಮಾಧ್ಯಮವಾಗಿದೆ’ ಎಂದು ತಿಳಿಸಿದರು.
‘ಸುಲಲಿತ ಬದುಕು, ವ್ಯವಹಾರ, ಪ್ರಯಾಣ, ಸಂವಹನವು ಸೇರಿದಂತೆ ಸುಲಲಿತ ನ್ಯಾಯವು ದೇಶದ ಪ್ರಮುಖ ಆದ್ಯತೆಗಳಾಗಿವೆ’ ಎಂದು ಮೋದಿ ಉಲ್ಲೇಖಿಸಿದರು.
‘ದೇಶದಲ್ಲಿನ ಸಂಪೂರ್ಣ ನ್ಯಾಯ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಸುಪ್ರೀಂ ಕೋರ್ಟ್, ಮಾರ್ಗದರ್ಶನವನ್ನು ನೀಡುತ್ತಿದೆ. ಎಲ್ಲ ಭಾಗಕ್ಕೂ ನ್ಯಾಯಾಲಯವು ಪ್ರವೇಶಿಸುವ ನಿಟ್ಟಿನಲ್ಲಿ ಸರ್ಕಾರ ಆದ್ಯತೆ ನೀಡುತ್ತಿದೆ. ಇ ಕೋರ್ಟ್ ಮಿಷನ್ ಯೋಜನೆಯ ಮೂರನೇ ಹಂತಕ್ಕೆ ಒಪ್ಪಿಗೆ ನೀಡಲಾಗುವುದು. ಮೂರನೇ ಹಂತದ ಅನುದಾನ ಹಂಚಿಕೆಯು ಎರಡನೇ ಹಂತಕ್ಕಿಂತ ನಾಲ್ಕು ಪಟ್ಟು ಹೆಚ್ಚಿರಲಿದೆ’ ಎಂದು ಅವರು ಹೇಳಿದರು.
ದೇಶದ ಎಲ್ಲಾ ನ್ಯಾಯಾಲಯಗಳ ಡಿಜಿಟಲೀಕರಣವನ್ನು ಮುಖ್ಯ ನ್ಯಾಯಮೂರ್ತಿಯವರೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
‘ಹಳೆಯದರಿಂದ ಹೊಸದಕ್ಕೆ ತಡೆರಹಿತ ವರ್ಗಾವಣೆಯನ್ನು ಖಾತ್ರಿಪಡಿಸಲು ಎಲ್ಲ ಮಧ್ಯಸ್ಥಗಾರರ ಸಾಮರ್ಥ್ಯ ವರ್ಧನೆಯಲ್ಲಿ ತೊಡಗಿಸಿಕೊಳ್ಳುವ ಹಕ್ಕು ಪ್ರತಿಯೊಬ್ಬ ನಾಗರಿಕರಿಗೂ ಮತ್ತು ಸುಪ್ರೀಂ ಕೋರ್ಟ್ಗೂ ಇದೆ’ ಎಂದು ಅವರು ಒತ್ತಿ ಹೇಳಿದರು.