ನವದೆಹಲಿ: ವೈದ್ಯರು ಕಡ್ಡಾಯವಾಗಿ ಜೆನೆರಿಕ್ ಔಷಧಿಗಳನ್ನು ಶಿಫಾರಸು ಮಾಡಬೇಕೆಂಬ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ನಿಯಮಗಳನ್ನು ಹಿಂಪಡೆಯುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪತ್ರ ಬರೆದಿದೆ.
ಔಷಧ ಕಂಪನಿಗಳು ಆಯೋಜಿಸುವ ಸಮಾರಂಭಗಳಿಗೂ ವೈದ್ಯರು ಹಾಜರಾಗಬಾರದು ಎಂಬ ನಿಯಮದ ಬಗ್ಗೆಯೂ ವೈದ್ಯಕೀಯ ಸಂಘ ಆತಂಕ ವ್ಯಕ್ತಪಡಿಸಿದ್ದು, ಇಂಥ ನಿಯಮಗಳು ಪುನರ್ಪರಿಶೀಲನೆಯಾಗಬೇಕು ಎಂದು ಆಗ್ರಹಿಸಿದೆ. ಎನ್ಎಂಸಿ ನಿಯಮಾವಳಿಗಳಿಂದ ಸಂಘಗಳು ಮತ್ತು ಸಂಸ್ಥೆಗಳಿಗೆ ವಿನಾಯಿತಿ ನೀಡಬೇಕು ಎಂದು ಅದು ಆಗ್ರಹಿಸಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿರುವ ಭಾರತೀಯ ವೈದ್ಯಕೀಯ ಸಂಘ ಮತ್ತು ಔಷಧ ತಯಾರಕರ ಒಕ್ಕೂಟ ಎನ್ಎಂಸಿಯ ನಿಯಮಾವಳಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿತು.
ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು. ಒಂದು ವೇಳೆ ಜೆನೆರಿಕ್ ಔಷಧ ಸೂಚಿಸಲು ವಿಫಲವಾಗಿದ್ದೇ ಆದಲ್ಲಿ ದಂಡ ವಿಧಿಸುವ ಹಾಗೂ ವೃತ್ತಿ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮಾವಳಿಗಳಲ್ಲಿ ಹೇಳಲಾಗಿದೆ.