ದುಬೈ: ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಡೆಯುವುದಕ್ಕಾಗಿ ಪ್ಯಾರಿಸ್ ಒಪ್ಪಂದವನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದು ಜಾಗತಿಕ ನಾಯಕರನ್ನು ಭಾರತ ಬುಧವಾರ ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಸಮಾವೇಶದ (ಸಿಒಪಿ28) ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪರಿಸರ ಸಚಿವ ಭೂಪೇಂದ್ರ ಯಾದವ್, ‘ಪ್ಯಾರಿಸ್ ಒಪ್ಪಂದದ ಅನುಷ್ಠಾನವು ನ್ಯಾಯಸಮ್ಮತ ಹಾಗೂ ಎಲ್ಲರ ಹಕ್ಕುಗಳನ್ನು ಗೌರವಿಸುವ ತತ್ವದಡಿ ನಡೆಯಬೇಕು’ ಎಂದು ಪ್ರತಿಪಾದಿಸಿದರು.
‘ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ಸಂಬಂಧ ಪ್ಯಾರಿಸ್ ಒಪ್ಪಂದದಲ್ಲಿ ಹಲವು ಗುರಿಗಳನ್ನು ನಿಗದಿಪಡಿಸಲಾಗಿದೆ. ಈ ಗುರಿಗಳನ್ನು ಸಾಧಿಸುವುದಕ್ಕಾಗಿ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುವಲ್ಲಿ ಈ ವರೆಗಿನ ಸಾಮೂಹಿಕ ಪ್ರಯತ್ನಗಳು ವಿಶ್ವಕ್ಕೆ ಸಕಾರಾತ್ಮಕ ಸಂದೇಶಗಳನ್ನು ರವಾನಿಸಿವೆ’ ಎಂದೂ ಸಚಿವ ಯಾದವ್ ಹೇಳಿದರು.