ಮುಜಾಫರ್ನಗರ: ಎಟಿಎಂನಿಂದ ₹18 ಲಕ್ಷ ಕಳ್ಳತನ ಪ್ರಕರಣದಲ್ಲಿಶಾಮೀಲಾಗಿದ್ದ ಆರೋಪದಲ್ಲಿ ಉತ್ತರ ಪ್ರದೇಶದ ಶಿಮ್ಲಿ ಜಿಲ್ಲೆಯ ಓವರ್ಸೀಸ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ಪೊಲೀಸರು ಬಂಧಿಸಿದ್ದಾರೆ.
ತಲೆಮರೆಸಿಕೊಂಡಿದ್ದ ವ್ಯವಸ್ಥಾಪಕ ರಾಬಿನ್ ಬನ್ಸಾಲ್ ಎಂಬುವರನ್ನು ಬಂಧಿಸಿ ₹14 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ಕುಮಾರ್ ತಿಳಿಸಿದರು.
‘ಬ್ಯಾಂಕ್ನ ಬಂಟಿಖೇಡಾ ಎಂಬ ಗ್ರಾಮದಲ್ಲಿನ ಶಾಖೆಯ ಎಟಿಎಂನಲ್ಲಿ ಮಾರ್ಚ್ 4ರಂದು ₹18 ಲಕ್ಷ ಕಳ್ಳತನವಾಗಿತ್ತು. ಪ್ರಮುಖ ಆರೋಪಿ ಚೇತನ್ ಎಂಬಾತನನ್ನು ಈ ಮೊದಲೇ ಬಂಧಿಸಲಾಗಿದೆ. ಈತನಿಗೆ ಪಾಸ್ವರ್ಡ್ ನೀಡಿದ್ದ ಬನ್ಸಾಲ್, ಎಟಿಎಂ ತೆರೆಯುವ ತಂತ್ರವನ್ನೂ ಹೇಳಿಕೊಟ್ಟಿದ್ದರು’ ಎಂದು ಅವರು ಹೇಳಿದರು.
ಈ ಪ್ರಕರಣದ ತನಿಖೆ ಸಂದರ್ಭದಲ್ಲಿ ₹4 ಕೋಟಿ ಹಗರಣ ಕೂಡ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.