ಪುಣೆ: ‘ಹಣದುಬ್ಬರ ಅನೇಕ ದೇಶಗಳಲ್ಲಿ ಪರಿಣಾಮ ಬೀರುತ್ತಿದೆ. ಅಮೆರಿಕದಂಥ ಶ್ರೀಮಂತ ದೇಶದ ಮೇಲೂ ಪರಿಣಾಮ ಬೀರಿದೆ. ನೀವು ತಪ್ಪಿತಸ್ಥ ಭಾವನೆಗೆ ಒಳಗಾಗಬೇಕಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
ಅವರು ಪುಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
‘ಹಣದುಬ್ಬರ ಏರಿಕೆ ಬಗ್ಗೆ ಚರ್ಚೆಯಾಗುತ್ತಿದೆ. ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಇಡೀ ಆರ್ಥಿಕತೆ ಸ್ಥಗಿತಗೊಂಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ವಿವೇಕದಿಂದ ಆರ್ಥಿಕತೆ ಹದಗೆಡಲು ಬಿಡಲಿಲ್ಲ’ ಎಂದು ಅವರು ಹೇಳಿದರು.
ರಷ್ಯಾ–ಉಕ್ರೇನ್ ಸಂಘರ್ಷದಿಂದಾಗಿ ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯಾಗಿದೆ. ರಫ್ತು, ಆಮದಿಗೆ ತೊಂದರೆಯಾಗಿದೆ’ ಎಂದು ಅವರು ತಿಳಿಸಿದರು.
‘ಈ ಸ್ಥಿತಿಯಲ್ಲಿ ಯಾವುದೇ ದೇಶದ ಮೇಲೆ ಪರಿಣಾಮ ಆಗುವುದು ಸಹಜ. ವಿಶ್ವದ ಅತ್ಯಂತ ಶ್ರೀಮಂತ ದೇಶ ಎನ್ನಲಾಗುತ್ತಿರುವ ಅಮೆರಿಕದಲ್ಲೇ ಹಣದುಬ್ಬರ 40 ವರ್ಷಗಳ ಗರಿಷ್ಠ ಪ್ರಮಾಣದಲ್ಲಿದೆ ಎಂದರೆ ನೀವು ಅಚ್ಚರಿಪಡುತ್ತೀರಿ. ಸದ್ಯ ಭಾರತ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದೆ. ನಾವು ತಪ್ಪಿತಸ್ಥರೆಂದು ಭಾವಿಸಬಾರದು’ ಎಂದು ಅವರು ಹೇಳಿದ್ದಾರೆ.