ಕೋಲ್ಕತ್ತ: ‘ಕಷ್ಟಕಾಲದಲ್ಲಿ ಜೊತೆಗೆ ನಿಲ್ಲದ ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ನಾಯಕಿ ಮಮತಾ ಬ್ಯಾನರ್ಜಿ ಅವರ ನಡೆಯಿಂದ ತೀವ್ರ ನೋವು, ಅಪಮಾನವಾಗಿದೆ’ ಎಂದು ಹೇಳಿರುವ ಟಿಎಂಸಿ ಮುಖಂಡ ತಪಸ್ ರಾಯ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಟಿಎಂಸಿ ಉಪ ಮುಖ್ಯ ಸಚೇತಕರೂ ಆಗಿದ್ದ ಅವರು ರಾಜೀನಾಮೆ ಪತ್ರವನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರಿಗೆ ಸಲ್ಲಿಸಿದರು. ಲೋಕಸಭೆ ಚುನಾವಣೆ ಘೋಷಣೆಗೂ ಮೊದಲು ನಡೆದಿರುವ ಈ ಬೆಳವಣಿಗೆಯು ಟಿಎಂಸಿ ಪಕ್ಷಕ್ಕೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ.
ಹಿರಿಯ ನಾಯಕ ತಪಸ್ ರಾಯ್, ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿ ಅಥವಾ ಬೇರೆ ಇತರೆ ಪಕ್ಷಕ್ಕೆ ಸೇರ್ಪಡೆಯಾಗುವರು ಎಂದು ಕೇಳಿಬರುತ್ತಿದ್ದ ವದಂತಿಗೆ ಈ ಬೆಳವಣಿಗೆ ಬಲ ನೀಡಿದೆ. ‘ಸಕಾಲದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ರಾಯ್ ಪ್ರತಿಕ್ರಿಯಿಸಿದ್ದಾರೆ.
ವಿಧಾನಸಭೆಯಲ್ಲಿ ಬಾರಾನಗರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರ ಮನವೊಲಿಸಲು ಸಚಿವ ಬ್ರಾತ್ಯಾ ಬಸು ಮತ್ತು ಟಿಎಂಸಿಯ ಮಾಜಿ ವಕ್ತಾರ ಕುನಾಲ್ ಘೋಷ್ ಸೋಮವಾರ ರಾತ್ರಿ ಅವರ ಮನೆಗೆ ತೆರಳಿದ್ದರು. ಆದರೆ, ಅವರ ಯತ್ನ ಫಲ ನೀಡಿಲ್ಲ.
ರಾಯ್ ಮತ್ತು ಪಕ್ಷದ ಸಂಸದ ಸುದೀಪ್ ಬಂಡೋಪಾಧ್ಯಾಯ ನಡುವೆ ಭಿನ್ನಾಭಿಪ್ರಾಯವಿತ್ತು. ಕೆಲ ದಿನಗಳಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಕ್ಷೇತ್ರಕ್ಕೂ ಭೇಟಿ ನೀಡಿರಲಿಲ್ಲ.
ರಾಯ್ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ಜನವರಿ 12ರಂದು ದಾಳಿ ಮಾಡಿದ್ದರು. ಸುದ್ದಿಗಾರರ ಜೊತೆಗೆ ಮಾತನಾಡಿದ ರಾಯ್, ‘ದಾಳಿ ವೇಳೆ ಪಕ್ಷ, ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರು ತಮಗೆ ಬೆಂಬಲವಾಗಿ ನಿಲ್ಲಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.