ಮುಂಬೈ: ನಿಷೇಧಿತ ಭಯೋತ್ಪಾದಕ ಸಂಘಟನೆ ಐಎಸ್ಐಎಸ್ನ ಆರು ಬೆಂಬಲಿತರನ್ನು ಇತ್ತೀಚೆಗೆ ಬಂಧಿಸಿದ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಸುಲಭವಾಗಿ ವಂಚನೆಗೆ ಒಳಗಾಗಬಹುದಾದ ಯುವಕರ ತಂಡವನ್ನು ರಚಿಸುವ ಯೋಜನೆ ಹೊಂದಿದ್ದರು ಎಂದು 4 ಸಾವಿರ ಪುಟಗಳ ಆರೋಪ ಪಟ್ಟಿಯಲ್ಲಿ ಹೇಳಿದೆ.
ಮಹಾರಾಷ್ಟ್ರದ ವಿವಿಧೆಡೆ ಎನ್ಐಎ ನಡೆಸಿದ ದಾಳಿಯಲ್ಲಿ ಈ ಆರು ಜನರನ್ನು 2023ರ ಜುಲೈನಲ್ಲಿ ಬಂಧಿಸಲಾಗಿತ್ತು. ಇವರು ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗುವ ಯೋಜನೆಯನ್ನು ಹೊಂದಿದ್ದನ್ನು ತನಿಖೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ತಬಿಷ್ ಸಿದ್ದಿಕಿ, ಝುಲ್ಫಿಕರ್ ಅಲಿ, ಶೇರ್ಜೀಲ್ ಶೇಖ್, ಆಕಿಫ್ ಅತೀಕ್ ನಾಚನ್, ಝುಬೇರ್ ಶೇಖ್ ಮತ್ತು ಅಂದ್ನಾಲಿ ಸರ್ಕಾರ್ ಬಂಧಿತರು. ಈ ಪ್ರಕರಣಕ್ಕೆ ಒಟ್ಟು 16 ಸಾಕ್ಷಿಗಳನ್ನು ಎನ್ಐಕೆ ನ್ಯಾಯಾಲಯಕ್ಕೆ ಒದಗಿಸಿದೆ.
ಬಂಧಿತರು ಛೋಟಿ ಮಸೀದಿ, ಪಡ್ಘಾ ಬೋರಿವಲಿನಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದರು. ಇವರ ವಂಚನೆಯ ಜಾಲಕ್ಕೆ ಸುಲಭವಾಗಿ ಸಿಲುಕುವ ಯುವಕರನ್ನು ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುವ ಯೋಜನೆ ರೂಪಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ತಮ್ಮ ಭಯೋತ್ಪಾದಕ ಕೃತ್ಯಗಳಿಗೆ ಹಾಗೂ ಯೋಜನೆಗಳಿಗೆ ಹಣ ಸಂಗ್ರಹಿಸುತ್ತಿದ್ದರು. ಜತೆಗೆ ಸ್ಫೋಟಕಗಳನ್ನು ಸಿದ್ಧಪಡಿಸುವ ಯೋಜನೆ ಹೊಂದಿದ್ದರು. ಜತೆಗೆ ಅದಕ್ಕೆ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು ಎಂದು ಹೇಳಲಾಗಿದೆ.