ಅಮರಾವತಿ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ‘ಯುವಜನ ಶ್ರಮಿಕ ರೈತ ಕಾಂಗ್ರೆಸ್’ (ವೈಎಸ್ಆರ್ಸಿ) ಪಕ್ಷದ ಅಜೀವ ಅಧ್ಯಕ್ಷರಾಗಿ ಶನಿವಾರ ಆಯ್ಕೆಯಾದರು.
ಪಕ್ಷದ ಸಂವಿಧಾನತಿದ್ದುಪಡಿ ಮಾಡಿದ ನಂತರ ಜಗನ್ ಅವರನ್ನು ಜೀವಿತಾವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷ ತ್ಯಜಿಸಿದ ಬಳಿಕ 2011ರಲ್ಲಿ ಜಗನ್,ವೈಎಸ್ಆರ್ ಕಾಂಗ್ರೆಸ್ ಸ್ಥಾಪಿಸಿದರು. ಆಗಿನಿಂದಲೂ ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದು, ತಾಯಿ ವಿಜಯಮ್ಮ ಗೌರವಾಧ್ಯಕ್ಷರಾಗಿದ್ದರು.
ಶುಕ್ರವಾರವಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದವಿಜಯಮ್ಮ, ‘ನೆರೆಯ ರಾಜ್ಯದಲ್ಲಿ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಮುನ್ನಡೆಸುತ್ತಿರುವ ಪುತ್ರಿ ಶರ್ಮಿಳಾ ಅವರಿಗೆ ಬೆಂಬಲ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ತಿಳಿಸಿದ್ದಾರೆ.
ಕಡೆ ಬಾರಿ, 2017ರಲ್ಲಿ ಪಕ್ಷದ ಸಭೆಯಲ್ಲಿ ಜಗನ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು.ಜಗನ್ ಅವರನ್ನು ಜೀವಿತಾವಧಿಗೆ ಪಕ್ಷದ ಮುಖ್ಯಸ್ಥರಾಗಿರಲು ಕೇಂದ್ರ ಚುನಾವಣಾ ಆಯೋಗದ ಒಪ್ಪಿಗೆ ಪಡೆಯಬೇಕಾಗಿದೆ.