ಪಲಮನೇರು: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ರಾಜ್ಯದ ರಾಯಲಸೀಮಾ ಪ್ರದೇಶದ ನೀರಾವರಿ ಕ್ಷೇತ್ರವನ್ನು ಪೂರ್ಣವಾಗಿ ನಾಶಪಡಿಸಿದ್ದಾರೆ ಎಂದು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದರು.
ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಎಕರೆಗೆ ನೀರು ಪೂರೈಸಲು ಆಗಿಲ್ಲ ಎಂದು ಆರೋಪಿಸಿದ ಅವರು, ರಾಯಲಸೀಮಾದ ಪ್ರತಿ ಹಳ್ಳಿಯಲ್ಲೂ ನಕಲಿ ಮದ್ಯ, ಗಾಂಜಾ ಮತ್ತು ಇತರ ಮಾದಕ ಪದಾರ್ಥಗಳ ಮುಕ್ತ ಹರಿವನ್ನು ರೆಡ್ಡಿ ಪ್ರೋತ್ಸಾಹಿಸಿದ್ದಾರೆ ಎಂದರು.
ಪಲಮನೇರುವಿನಲ್ಲಿ ಬುಧವಾರ ನಡೆದ ‘ಪ್ರಜಾಗಳಂ’ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಜನರ ಆಸ್ತಿಯನ್ನು ಸೃಷ್ಟಿಸುವುದು ಮತ್ತು ಆದಾಯ ವೃದ್ಧಿಸುವುದು ನನ್ನ ಯೋಜನೆಯಾಗಿದ್ದರೆ, ಜಗನ್ ಅವರು ಯಾವಾಗಲೂ ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಜನರನ್ನು ಲೂಟಿ ಮಾಡುವ ಕೆಲಸ ಮಾಡುತ್ತಾರೆ’ ಎಂದು ದೂರಿದರು.
ಜಗನ್ ನೇತೃತ್ವದ ಆಡಳಿತ ಪಕ್ಷವನ್ನು ಸೋಲಿಸುವ ಮೂಲಕ ಇದಕ್ಕೆಲ್ಲ ಅಂತ್ಯವಾಡುವ ಸಮಯ ಬಂದಿದೆ ಎಂದ ಅವರು, ರಾಜ್ಯದಲ್ಲಿ ಎನ್ಡಿಎ ಸರ್ಕಾರ ರಚನೆಯಾದ ಬಳಿಕ ವಿದ್ಯುತ್ ಶುಲ್ಕವನ್ನು ಕ್ರಮಬದ್ಧಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಆಂಧ್ರಪ್ರದೇಶದಲ್ಲಿ ವಿಧಾನಸಭೆಯ 175 ಮತ್ತು ಲೋಕಸಭೆಯ 25 ಸ್ಥಾನಗಳಿಗೆ ಮೇ 13ರಂದು ಚುನಾವಣೆ ನಿಗದಿಯಾಗಿದೆ. ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಮೈತ್ರಿ (ಎನ್ಡಿಎ) ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.