ನವದೆಹಲಿ: ಇಡೀ ದೇಶದವನ್ನೇ ಬೆಚ್ಚಿಬೀಳಿಸಿದ್ದ ಕಠುವಾ ಅತ್ಯಾಚಾರ ಪ್ರಕರಣದ ಏಳು ಆರೋಪಿಗಳ ಪೈಕಿ ಆರು ಮಂದಿಯನ್ನು ದೋಷಿಗಳು ಎಂದು ತೀರ್ಪು ನೀಡಿರುವ ಪಟಾನ್ಕೋಟ್ ನ್ಯಾಯಾಲಯ, ಪ್ರಕರಣದ ಮಾಸ್ಟರ್ ಮೈಂಡ್ ಸಾಂಜಿ ರಾಮ್ ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಮೂವರು ಪ್ರಮುಖ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಸಾಕ್ಷ್ಯ ನಾಶಪಡಿಸಿದ ಆರೋಪಿಗಳಾದ ಮೂವರು ಪೊಲೀಸರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿತು.
ಪ್ರಕರಣದ ಏಳು ಆರೋಪಿಗಳ ಪೈಕಿ ವಿಶಾಲ್ನನ್ನು ಪ್ರಕರಣದಿಂದ ಕೈ ಬಿಡಲಾಗಿದೆ.
ಇಡೀ ದೇಶದವನ್ನೇ ಬೆಚ್ಚಿಬೀಳಿಸಿದ್ದ ಕಠುವಾ ಅತ್ಯಾಚಾರ ಪ್ರಕರಣದ ಏಳು ಆರೋಪಿಗಳ ಪೈಕಿ ಆರು ಮಂದಿಯನ್ನು ದೋಷಿಗಳು ಎಂದು ಪಟಾನ್ಕೋಟ್ ನ್ಯಾಯಾಲಯ ಇಂದು ತೀರ್ಪಿತ್ತಿದೆ. ಇನ್ನೊಬ್ಬ ಆರೋಪಿ ವಿಶಾಲ್ನನ್ನು ಪ್ರಕರಣದಿಂದ ಕೈ ಬಿಡಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಸಾಂಜಿ ರಾಮ್, ಆನಂದ್ ದತ್ತಾ, ಪರವೇಶ್ ಕುಮಾರ್, ದೀಪಕ್ ಕಜಾರಿಯಾ, ಸುರೇಂದ್ರ ವರ್ಮಾ ಮತ್ತು ತಿಲಕ್ ರಾಜ್ ಎಂಬುವವರನ್ನು ದೋಷಿಗಳು ಎಂದು ಘೋಷಿಸಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ಸಾಂಜಿ ರಾಮ್ನ ಪುತ್ರ ವಿಶಾಲ್ನನ್ನು ಸದ್ಯಕ್ಕೆ ಕೈಬಿಡಲಾಗಿದೆ. ಘಟನೆ ನಡೆದ ಅವಧಿಯಲ್ಲಿ ತಾನು ಉತ್ತರ ಪ್ರದೇಶದಲ್ಲಿ ಪರೀಕ್ಷೆಯೊಂದಕ್ಕೆ ತೆರಳಿದ್ದೆ ಎಂದು ಆತ ಎಂದು ವಾದಿಸಿದ್ದಾನೆಎಂದು ಬಾಲಕಿ ಪೋಷಕರ ಪರ ವಾದ ಮಂಡಿಸಿದ್ದ ಮುಬಿನ್ ಫಾರೂಖಿ ಹೇಳಿದ್ದಾರೆ.
Kathua rape & murder case: Accused Vishal has been acquitted by the Court. https://t.co/XJyJlqOMAA
— ANI (@ANI) June 10, 2019
ಕಳೆದ ವರ್ಷ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕಟುವಾದಲ್ಲಿ ಈ ಅತ್ಯಾಚಾರ ಪ್ರಕರಣ ನಡೆದಿತ್ತು. ಮುಸ್ಲಿಂ ಬುಡಕಟ್ಟು ಅಲೆಮಾರಿ ಜನಾಂಗಕ್ಕೆ ಸೇರಿದ 8 ವರ್ಷದ ಬಾಲಕಿಯನ್ನು ಕೇವಲ ಧಾರ್ಮಿಕ ಕಾರಣಗಳಿಗಾಗಿ ಆರೋಪಿಗಳು ಅಪಹರಿಸಿ, ಅಜ್ಞಾತ ಸ್ಥಳದಲ್ಲಿರಿಸಿಕೊಂಡು ನಿರಂತರ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಾಲಕಿಗೆ ಚಿತ್ರ ಹಿಂಸೆ ನೀಡಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದರು. ಜನವರಿ 10ರಂದು ನಾಪತ್ತೆಯಾಗಿದ್ದ ಬಾಲಕಿ ಜನವರಿ 17ರಂದು ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲಿಗೆ ಅಪ್ರಾಪ್ತ ಬಾಲಕನೊಬ್ಬನನ್ನು ಬಂಧಿಸಿದ್ದರು. ಘಟನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ವ್ಯಕ್ತವಾಗುತ್ತಲೇ ಪ್ರಕರಣವನ್ನು ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಒಬ್ಬ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಒಬ್ಬ ಮುಖ್ಯಪೇದೆಯನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಸಂಜಿ ರಾಮ್ ಎಂಬ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ಮಾರ್ಚ್ 20ರಂದು ತಾನಾಗಿಯೇ ಶರಣಾಗಿದ್ದ. ನಂತರ ಈತನ ಮಗ ವಿಶಾಲ್, ಸಂಜಿಲಾಲ್ನ ಸೋದರಳಿಯ ಅಪ್ರಾಪ್ತ ಬಾಲಕ, ಸ್ನೇಹಿತ ಆನಂದ್ ದತ್ತಾ ಮತ್ತು ಪೊಲೀಸ್ ಸಿಬ್ಬಂದಿಯಾದ ದೀಪಕ್ ಖಜಾರಿಯಾ, ಸುರೇಂದ್ರ ವರ್ಮಾ ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಿಸಿದ್ದರು.
ಬಂದಿತ ಪೊಲೀಸ್ ಸಿಬ್ಬಂದಿಯಾದ ದೀಪಕ್ ಖಜಾರಿಯಾ, ಸುರೇಂದ್ರ ವರ್ಮಾ ಅವರ ಮೇಲೆ ಸಾಕ್ಷ್ಯ ನಾಶದ ಆರೋಪಗಳನ್ನಷ್ಟೇ ಹೊರಿಸಲಾಗಿದೆ.
ಸ್ಥಳೀಯವಾಗಿ ಮುಸ್ಲಿಂ ಸಮುದಾಯದಲ್ಲಿ ಭಯ ಹುಟ್ಟಿಸುವ ಸಲುವಾಗಿ ಆರೋಪಿಗಳು ಈ ಕೃತ್ಯ ಎಸಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.