ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಕೇಜ್ರಿವಾಲ್ ಪರ ಬೆಂಬಲ ಕೋರಿ ಪತ್ನಿಯಿಂದ ವಾಟ್ಸ್‌ಆ್ಯಪ್‌ ಅಭಿಯಾನ

Published 29 ಮಾರ್ಚ್ 2024, 8:03 IST
Last Updated 29 ಮಾರ್ಚ್ 2024, 8:03 IST
ಅಕ್ಷರ ಗಾತ್ರ

ನವದೆಹಲಿ : ಜಾರಿ ನಿರ್ದೇಶನಾಲಯದ (ಇ.ಡಿ) ಬಂಧನದಲ್ಲಿರುವ ತಮ್ಮ ಪತಿ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಬೆಂಬಲ ನೀಡುವಂತೆ ಕೋರಿ ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ‘ಕೇಜ್ರಿವಾಲ್‌ಗೆ ಆಶೀರ್ವಾದ’ ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. 

ತಮ್ಮ ಪತಿ ಅರವಿಂದ್‌ ಕೇಜ್ರಿವಾಲ್‌ ‘ಅತ್ಯಂತ ಭ್ರಷ್ಟ ಮತ್ತು ಸರ್ವಾಧಿಕಾರಿ ಶಕ್ತಿಗೆ ಸವಾಲು ಹಾಕಿದ್ದಾರೆ. ಜನರು ತಮ್ಮ ಆಶೀರ್ವಾದ ಮತ್ತು ಪ್ರಾರ್ಥನೆಯ ಮೂಲಕ ಅವರಿಗೆ ಬೆಂಬಲ ನೀಡಬೇಕು’ ಎಂದು ಸುನೀತಾ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

‘ಕೇಜ್ರಿವಾಲ್‌ಗೆ ಆಶೀರ್ವಾದ’ ಎಂಬ ವಾಟ್ಸ್‌ಆ್ಯಪ್‌ ಅಭಿಯಾನವನ್ನು ಸುನೀತಾ ಪ್ರಾರಂಭಿಸಿದರು. 8297324624 ಮತ್ತು 9700297002 ಎಂಬ ಎರಡು ವಾಟ್ಸ್‌ಆ್ಯಪ್‌ ಸಂಖ್ಯೆಯನ್ನು ನೀಡಿದ ಅವರು, ‘ಈ ಮೊಬೈಲ್‌ ಸಂಖ್ಯೆಗಳಿಗೆ ಕೇಜ್ರಿವಾಲ್‌ ಅವರಿಗೆ ನೀವು ಆಶೀರ್ವಾದ, ಪ್ರಾರ್ಥನೆ ಅಥವಾ ಯಾವುದೇ ರೀತಿಯ ಸಂದೇಶಗಳನ್ನು ರವಾನಿಸಬಹುದು. ಕೇಜ್ರಿವಾಲ್‌ ಅವರಿಗೆ ನಿಮ್ಮ ಸಂದೇಶಗಳನ್ನು ತಿಳಿಸುತ್ತೇನೆ’ ಎಂದರು.  

‘ಗುರುವಾರ ಅರವಿಂದ್‌ ಕೇಜ್ರಿವಾಲ್‌ ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತಾವೇ ವಾದ ಮಂಡಿಸಿದರು. ಇಡೀ ದೇಶವೇ ಅದನ್ನು ಕೇಳಿದೆ. ನೀವು ಕೇಳಲಿಲ್ಲವೆಂದಾದರೆ ಒಮ್ಮೆ ಕೇಳಿ. ನ್ಯಾಯಾಲಯದ ಮುಂದೆ ಅವರು ಏನೇ ಹೇಳಿದ್ದರೂ ಅದಕ್ಕೆ ಧೈರ್ಯ ಬೇಕು. ಕೇಜ್ರಿವಾಲ್‌ ನಿಜವಾದ ದೇಶಭಕ್ತ. ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಹೇಗೆ ಹೋರಾಡಿದರೋ ಅದೇ ರೀತಿ ಕೇಜ್ರಿವಾಲ್‌ ಹೋರಾಡುತ್ತಿದ್ದಾರೆ. ನಾನು ಕಳೆದ 30 ವರ್ಷಗಳಿಂದ ಅವರ ಜೊತೆಗಿದ್ದೇನೆ. ಅವರ ಕಣ ಕಣದಲ್ಲಿಯೂ ದೇಶಭಕ್ತಿ ಇದೆ. ದೇಶದ ಅತ್ಯಂತ ಶಕ್ತಿಶಾಲಿ, ಭ್ರಷ್ಟ ಮತ್ತು ಸರ್ವಾಧಿಕಾರಿಗಳಿಗೆ ಅವರು ಸವಾಲು ಹಾಕಿದ್ದಾರೆ’ ಎಂದರು.

‘ಅರವಿಂದ್‌ ಅವರನ್ನು ನಿಮ್ಮ ಮಗ ಮತ್ತು ಸಹೋದರ ಎಂದು ನೀವು ಕರೆದಿದ್ದಿರಿ. ಈಗ ನಿಮ್ಮ ಸಹೋದರ, ಮಗನ ಈ ಹೋರಾಟಕ್ಕೆ ನೀವು ಬೆಂಬಲಿಸುವುದಿಲ್ಲವೇ? ಸಮರದಲ್ಲಿ ನಾವೆಲ್ಲರೂ ಹೋರಾಡುತ್ತೇವೆ ಎಂದು ನನಗೆ ವಿಶ್ವಾಸವಿದೆ’ ಎಂದರು.  

ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ನಡೆಸಿದ ಆರೋಪದಡಿ ಇ.ಡಿ. ಕೇಜ್ರಿವಾಲ್‌ ಅವರನ್ನು ಬಂಧಿಸಿದೆ. 

‘ಚುನಾವಣಾ ತಂತ್ರದ ಮಾಹಿತಿ ಪಡೆಯಲು ಇ.ಡಿ. ಯತ್ನ’

‘ಜಾರಿ ನಿರ್ದೇಶನಾಲಯವನ್ನು (ಇ.ಡಿ.) ಬಿಜೆಪಿಯು ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಮೊಬೈಲ್‌ ಫೋನ್‌ ಮೂಲಕ ಎಎಪಿಯ ಲೋಕಸಭಾ ಚುನಾವಣಾ ತಂತ್ರಗಾರಿಕೆಯ ಮಾಹಿತಿ ಪಡೆಯಲು ಯತ್ನಿಸುತ್ತಿದೆ’ ಎಂದು ದೆಹಲಿ ಸಚಿವೆ ಆತಿಶಿ ಶುಕ್ರವಾರ ಆರೋಪಿಸಿದರು. ‘ವಾಸ್ತವವಾಗಿ ಕೇಜ್ರಿವಾಲ್‌ ಅವರ ಫೋನ್‌ನಲ್ಲಿ ಏನಿದೆ ಎಂಬುದನ್ನು ಅರಿಯುವುದು ಇ.ಡಿ. ಉದ್ದೇಶವಲ್ಲ. ಆದರೆ ಈ ಕುರಿತು ತಿಳಿದುಕೊಳ್ಳುವ ತವಕ ಬಿಜೆಪಿಗಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘2021–22ರಲ್ಲಿ ಅಬಕಾರಿ ನೀತಿ ಜಾರಿಗೆ ಬಂದಾಗ ಕೇಜ್ರಿವಾಲ್‌ ಅವರ ಬಳಿ ಈ ಫೋನ್‌ ಇರಲಿಲ್ಲ. ಇದು ಕೆಲವೇ ತಿಂಗಳಷ್ಟು ಹಳೆಯದು. ಆ ಅವಧಿಯಲ್ಲಿ ಕೇಜ್ರಿವಾಲ್‌ ಬಳಸಿದ್ದ ಫೋನ್‌ ಲಭ್ಯವಿಲ್ಲ ಎಂದು ಇ.ಡಿ. ಹೇಳಿದೆ. ಹೊಸ ಫೋನಿನ ಪಾಸ್‌ವರ್ಡ್‌ ಬೇಕು ಎಂದೂ ಅದು ಹೇಳುತ್ತಿದೆ. ಎಎಪಿಯ ಲೋಕಸಭಾ ಚುನಾವಣೆಯ ಕಾರ್ಯತಂತ್ರ ಪ್ರಚಾರ ಯೋಜನೆ ‘ಇಂಡಿಯಾ’ ಮೈತ್ರಿಕೂಟದ ಜತೆಗಿನ ಮಾತುಕತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ತಂತ್ರಗಾರಿಕೆ ಕುರಿತ ವಿವರವನ್ನು ಪಡೆಯಲು ಬಿಜೆಪಿ ಹವಣಿಸುತ್ತಿದೆ. ಇದಕ್ಕಾಗಿ ಇ.ಡಿಯನ್ನು ಅಸ್ತ್ರವಾಗಿ ಬಳಸುತ್ತಿದೆ’ ಎಂದು ಅವರು ದೂರಿದರು. 

ರಾಬ್ಡಿದೇವಿಗೆ ಹೋಲಿಸಿದ ಹರ್ದೀಪ್

ಕೇಂದ್ರ ಸಚಿವ ಹರ್ದೀಪ್ ಸಿಂಗ್‌ ಪುರಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪತ್ನಿ ಸುನೀತಾ ಅವರನ್ನು  ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರಿಗೆ ಹೋಲಿಸಿದರು.  ಶುಕ್ರವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು ‘ಬಿಹಾರದಲ್ಲಿ ರಾಬ್ಡಿ ದೇವಿ ಅವರು ಮಾಡಿದಂತೆ ಮೇಡಂ ಸಹ ಪತಿಯ ಹುದ್ದೆಯಲ್ಲಿ ಕೂರಲು ಸಿದ್ಧರಾಗುತ್ತಿರಬಹುದು’ ಎಂದು ವ್ಯಂಗ್ಯವಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT