ನವದೆಹಲಿ: ಪಂಜಾಬ್ನಲ್ಲಿ ಸರ್ಕಾರಿ ನೌಕರರಿಗೆ ಆಗಸ್ಟ್ ತಿಂಗಳ ಸಂಬಳವನ್ನು ಇನ್ನೂ ಕೊಟ್ಟಿಲ್ಲ ಎಂಬ ವರದಿಯನ್ನು ಉಲ್ಲೇಖಿಸಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ ಅವರನ್ನು ಟೀಕಿಸಿದ್ದಾರೆ.
ಭಗವಂತ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ಹಣಕಾಸು ಕೊರತೆಯನ್ನು ಎದುರಿಸುತ್ತಿದೆ. ಹಾಗಾಗಿ ನೌಕರರಿಗೆ ಆಗಸ್ಟ್ ತಿಂಗಳ ಸಂಬಳವನ್ನು ಬಾಕಿ ಉಳಿಸಿಕೊಂಡಿದೆ ಎಂದು ಮೂಲಗಳನ್ನು ಆಧರಿಸಿ ಪ್ರಕಟಿಸಲಾದ ವರದಿಗಳು ಆರೋಪಿಸಿವೆ.
ಭಾರತವನ್ನು ವಿಶ್ವದ ನಂ.1 ರಾಷ್ಟ್ರ ಮಾಡಲು ಕೇಜ್ರಿವಾಲ್ ಬಯಸುತ್ತಾರೆ. ಆದರೆ ಪಂಜಾಬ್ನಲ್ಲಿ ಒಂದು ವರ್ಷ ಅವಧಿಯಲ್ಲಿ ಅವರು ಮಾಡಿದ್ದೇನು? ಎಂದು ಕಿರಣ್ ರಿಜಿಜು ಪ್ರಶ್ನಿಸಿದ್ದಾರೆ.
ಎಎಪಿಯೇ ಅಧಿಕಾರದಲ್ಲಿರುವ ದೆಹಲಿಯಲ್ಲಿಯೂ ದೊಡ್ಡ ಮೊತ್ತದ ತೆರಿಗೆ ಹಣವನ್ನು ದುಂದುವೆಚ್ಚದ ಮೂಲಕ ವ್ಯರ್ಥ ಮಾಡಲಾಗಿದೆ ಎಂದು ರಿಜಿಜು ಆರೋಪಿಸಿದ್ದಾರೆ.
'ದೆಹಲಿ ರಾಷ್ಟ್ರದ ರಾಜಧಾನಿ ಮತ್ತು ದೆಹಲಿಯ ಸರಾಸರಿ ತಲಾ ಆದಾಯವು ರಾಷ್ಟ್ರದ ತಲಾ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚಿರುತ್ತದೆ. ಅತಿ ದೊಡ್ಡ ಮೊತ್ತದ ತೆರಿಗೆ ಹಣವನ್ನು ದುಂದುವೆಚ್ಚದ ಮೂಲಕ ನಷ್ಟ ಮಾಡಿದ್ದಾರೆ' ಎಂದು ಕೇಜ್ರಿವಾಲ್ ವಿರುದ್ಧ ಟ್ವೀಟ್ ಮೂಲಕ ರಿಜಿಜು ಕಿಡಿಕಾರಿದ್ದಾರೆ.