ಮುರಾದಾಬಾದ್: ಉತ್ತರಪ್ರದೇಶದ ಮುರಾದಾಬಾದ್ನಲ್ಲಿ 2010ರಲ್ಲಿ ನಡೆದಿದ್ದ ಇಬ್ಬರು ದಲಿತ ಸಹೋದರಿಯರ ಸಜೀವ ದಹನ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ 7 ಮಂದಿಗೆ ಪರಿಶಿಷ್ಟಜಾತಿ–ಪರಿಶಿಷ್ಟ ಪಂಗಡದ ವಿಶೇಷ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಹೆಚ್ಚುವರಿ ಜಿಲ್ಲಾ ಸರ್ಕಾರಿ ಅಭಿಯೋಜಕ ಆನಂದ್ ಪಾಲ್ ಸಿಂಗ್ ಅವರು ಮಂಡಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಏಳು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿದ ನ್ಯಾಯಮೂರ್ತಿ ಸಂಧ್ಯಾ ಚೌಧರಿ ಅವರು 26 ಪುಟಗಳ ಆದೇಶ ನೀಡಿದ್ದಾರೆ.
ಆರೋಪಿಗಳಾದ ಸತೀಶ್ ಮದನ್, ಸಾಗರ್ ಭಂಡುಲಾ, ಬಂಟಿ ಮಲಿಕ್, ಆಶಾ ಸಚ್ದೇವ, ಅಮರ್ಜೀತ್ ಕೌರ್, ವಿನೋದ್ ಕಾಜಕಾಡ್ ಮತ್ತು ಸಾನಿಯಾ ಕೊಹ್ಲಿ ಅವರನ್ನು ದೋಷಿಗಳೆಂದು ಘೋಷಿಸಿದ ನ್ಯಾಯಾಲಯವು ಅವರಿಗೆ ತಲಾ ₹ 1ಲಕ್ಷ ದಂಡ ವಿಧಿಸಿದೆ.
ಘಟನೆಯ ವಿವರಣೆ: ಸ್ವಚ್ಛತಾ ಕಾರ್ಮಿಕ ಮಹಿಳೆ ರಾಜೋ ಅವರ ಮಗ ರಾಕೇಶ್ ಮೇಲೆ 2010ರ ಡಿ. 9ರಂದು ನಡೆದ ದರೋಡೆ ಪ್ರಕರಣದಲ್ಲಿ 30 ವರ್ಷದ ಮಹಿಳೆ ಮತ್ತು ಆಕೆಯ 8 ವರ್ಷದ ಮಗಳನ್ನು ಹತ್ಯೆ ಮಾಡಿದ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ರಾಕೇಶ್ ಮತ್ತು ಆತನ ಸಹೋದರ ರಾಜೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ರಾಕೇಶನ ಕೃತ್ಯವನ್ನು ವಿರೋಧಿಸಿ 2010ರ ಡಿ. 18ರಂದು ಗುಂಪೊಂದು ಪ್ರತಿಭಟನೆ ನಡೆಸಿತ್ತು. ಕೋಥಿವಾಲ್ ನಗರದಲ್ಲಿದ್ದ ರಾಕೇಶನ ಮನೆಯ ಹೊರಗೆ ಜಮಾಯಿಸಿದ್ದ ಗುಂಪು ಆತನ ತಾಯಿ ಮತ್ತು ಸಹೋದರಿಯರಿಗೆ ಬೆಂಕಿ ಹಚ್ಚಿತ್ತು. ಈ ವೇಳೆ ಆರೋಪಿಯ ತಾಯಿ ರಾಜೋ ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಸಹೋದರಿಯರಾದ ಗೀತಾ (22) ಮತ್ತು ಮೋನು (20) ಸಜೀವವಾಗಿ ದಹನವಾಗಿದ್ದರು.