ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

77ನೇ ಸ್ವಾತಂತ್ರ್ಯಸಂಭ್ರಮ: ಪ್ರಧಾನಿಯಿಂದ ಚುನಾವಣೆ ಓಂಕಾರ

ಕುಟುಂಬ ರಾಜಕಾರಣ ವಿರುದ್ಧ ವಾಗ್ದಾಳಿ
Published 15 ಆಗಸ್ಟ್ 2023, 16:07 IST
Last Updated 15 ಆಗಸ್ಟ್ 2023, 16:07 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯಿಂದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ದೇಶದ ಜನರ ಮನೋಭೂಮಿಕೆ ಅಣಿಗೊಳಿಸಲು, ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಲು ವೇದಿಕೆಯಾಗಿ ಬಳಸಿಕೊಂಡರು.

‘ಬದಲಾವಣೆ ತರುವ ಭರವಸೆಯೊಂದಿಗೆ ನಾನು 2014ರಲ್ಲಿ ಅಧಿಕಾರಕ್ಕೆ ಬಂದೆ. ನನ್ನ ಸಾಧನೆಯ ಆಧಾರದ ಮೇಲೆ 2019ರಲ್ಲಿ ಮತ್ತೊಮ್ಮೆ ನನಗೆ  ಆಶೀರ್ವದಿಸಿದ್ದೀರಿ. ಬದಲಾವಣೆ ತರುವ ಭರವಸೆಯೇ ಮತ್ತೊಮ್ಮೆ ನನ್ನನ್ನು ಇಲ್ಲಿ ತಂದು ನಿಲ್ಲಿಸಿತು’ ಎಂದ ಅವರು, ‘ಮುಂದಿನ ವರ್ಷ ಆಗಸ್ಟ್‌ 15ರಂದು ಇದೇ ಕೆಂಪುಕೋಟೆಯಿಂದ ಮಾತನಾಡಿ, ದೇಶದ ಸಾಧನೆಗಳನ್ನು, ನಿಮ್ಮ ಸಾಮರ್ಥ್ಯಗಳನ್ನು ಜನರ ಮುಂದಿಡುವೆ’ ಎಂದರು.

ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸಿದ ಅವರು, ‘2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಬೇಕಾದರೆ ಯಾವುದೇ ಪರಿಸ್ಥಿತಿಯಲ್ಲಿಯೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬ ದೃಢನಿರ್ಧಾರ ಅಗತ್ಯ. ಜೊತೆಗೆ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ವಸ್ತುನಿಷ್ಠತೆಯೂ ಬೇಕು’ ಎಂದು ಪ್ರತಿಪಾದಿಸಿದರು.

‘ಭ್ರಷ್ಟಾಚಾರ, ತುಷ್ಟೀಕರಣ ಹಾಗೂ ಸ್ವಜನಪಕ್ಷಪಾತ ಎಂಬ ಅನಿಷ್ಟಗಳು ದೇಶವನ್ನು ಬಾಧಿಸುತ್ತಿವೆ. ಈ ಮೂರು ಅನಿಷ್ಟಗಳ ನಿರ್ಮೂಲನೆಯಲ್ಲಿಯೇ ಒಬಿಸಿಗಳು, ಪರಿಶಿಷ್ಟರು, ಪಸಮಂದಾ ಸಮುದಾಯದವರು, ಬುಡಕಟ್ಟು ಜನರು, ಮಹಿಳೆಯರು ಹಾಗೂ ಬಡವರ ಅಭ್ಯುದಯ ಅಡಗಿದೆ’ ಎಂದರು.

‘ಈ ಎಲ್ಲ ಸಮುದಾಯಗಳ ಹಕ್ಕುಗಳನ್ನು ಕಸಿದುಕೊಂಡಿರುವ ಕುಟುಂಬ ರಾಜಕಾರಣವನ್ನು ಸೋಲಿಸುವ ಮೂಲಕ ಮುಂದಿನ ವರ್ಷ ಇದೇ ವೇದಿಕೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವೆ’ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

90 ನಿಮಿಷಗಳ ತಮ್ಮ ಭಾಷಣದ ಮೂಲಕ ಅವರು, ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ವಿರುದ್ಧದ ತಮ್ಮ ಹೋರಾಟದ ವಿಷಯ ಏನಾಗಿರಲಿದೆ ಎಂಬುದನ್ನು ಸೂಚ್ಯವಾಗಿ ದೇಶದ ಮುಂದಿಟ್ಟರು.

‘ಕುಟುಂಬಕ್ಕಾಗಿ, ಕುಟುಂಬದಿಂದ ಮತ್ತು ಕುಟುಂಬಕ್ಕೋಸ್ಕರ ಎಂಬ ಮಂತ್ರ ಜಪಿಸುವ ಪಕ್ಷಗಳು ಸ್ವಜನಪ‍ಕ್ಷಪಾತ ಅನುಸರಿಸುತ್ತಿವೆ. ಈ ಅನಿಷ್ಟದಿಂದಾಗಿ ನಮ್ಮ ಪ್ರಜಾಪ್ರಭುತ್ವ ಭಾರಿ ಸಂಕಷ್ಟ ಎದುರಿಸಿದೆ. ಸ್ವಜನಪಕ್ಷಪಾತ, ತುಷ್ಟೀಕರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಸಾಮೂಹಿಕ ಹೋರಾಟ ಅಗತ್ಯ’ ಎಂದರು.

‘ನಾನು ಬದುಕಿರುವವರೆಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವೆ. ಇದು ನನ್ನ ಬದ್ಧತೆ. ವಿವಿಧ ಯೋಜನೆಗಳ ದುರ್ಬಳಕೆಗೆ ಕಾರಣವಾಗಿದ್ದ 10 ಕೋಟಿ ನಕಲಿ ಫಲಾನುಭವಿಗಳನ್ನು ನನ್ನ ಸರ್ಕಾರ ಕಿತ್ತೊಗೆದಿದೆ. ಜಪ್ತಿ ಮಾಡಿರುವ ಅಕ್ರಮ ಆಸ್ತಿಗಳ ಪ್ರಮಾಣ 20 ಪಟ್ಟುಗಳಷ್ಟು ಹೆಚ್ಚಿದೆ’ ಎನ್ನುವ ಮೂಲಕ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ವಿಪಕ್ಷಗಳತ್ತ ಚಾಟಿ ಬೀಸಿದರು.

ತಮ್ಮ ನೇತೃತ್ವದ ಸರ್ಕಾರದ ಸಾಧನೆಗಳನ್ನು ವಿವರಿಸಿದ ಅವರು, ಮತ್ತೊಮ್ಮೆ ಅಧಿಕಾರ ನೀಡಿದಲ್ಲಿ ಮುಂದಿನ ಐದು ವರ್ಷಗಳ ಕಾಲ ಅಭೂತಪೂರ್ವ ಅಭಿವೃದ್ಧಿ ಸಾಧಿಸುವುದಾಗಿ ಭರವಸೆ ನೀಡಿದರು.

ಮೋದಿ ಭಾಷಣದ ಪ್ರಮುಖ ಅಂಶಗಳು

* ಸರಣಿ ಬಾಂಬ್‌ ಸ್ಫೋಟದಂತಹ ಘಟನೆಗಳು ಈಗ ಇತಿಹಾಸ ಮಾತ್ರ. ದೇಶದ ಜನರಲ್ಲಿ ಈಗ ಸುರಕ್ಷತೆಯ ಭಾವನೆ ಮೂಡಿದೆ

* ನಕ್ಸಲರಿಂದ ಬಾಧಿತ ಪ್ರದೇಶಗಳಲ್ಲಿಯೂ ಹಿಂಸಾಚಾರ ತಗ್ಗಿದೆ

* ‘ಪ್ರಜಾಪ್ರಭುತ್ವ’, ‘ವೈವಿಧ್ಯ’ ಹಾಗೂ ‘ಜನಸಂಖ್ಯೆ’ ದೇಶದ ಶಕ್ತಿ. ಈ ‘ತ್ರಿವೇಣಿ’ಯು ಭಾರತದ ಪ್ರತಿಯೊಂದು ಕನಸನ್ನು ನನಸು ಮಾಡುವ ಶಕ್ತಿ ಹೊಂದಿದೆ 

ನವದೆಹಲಿಯ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಂಗಳವಾರ ಭಾಷಣ ಮಾಡುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಜನರತ್ತ ಕೈಬೀಸಿದರು –ಪಿಟಿಐ ಚಿತ್ರ
ನವದೆಹಲಿಯ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಂಗಳವಾರ ಭಾಷಣ ಮಾಡುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಜನರತ್ತ ಕೈಬೀಸಿದರು –ಪಿಟಿಐ ಚಿತ್ರ
ದೇಶದ ಪ್ರಜೆಗಳಿಗಾಗಿಯೇ ನಾನು ಉಸಿರಾಡುತ್ತಿರುವೆ. ನಿಮ್ಮ ಬಗ್ಗೆಯೇ ನಾನು ಕನಸು ಕಾಣುವುದು. ನಿಮ್ಮನ್ನು ನನ್ನ ಕುಟುಂಬದ ಸದಸ್ಯರೆಂದೇ ಪರಿಗಣಿಸುತ್ತೇನೆ
ನರೇಂದ್ರ ಮೋದಿ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT