ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ ವಿಧಾನಸಭೆ ಚುಣಾವಣೆ: ‘ಉಚಿತ’ಗಳ ಮೇಲಾಟದಲ್ಲಿ ಗೆಲುವು ಯಾರಿಗೆ?

Published 9 ಅಕ್ಟೋಬರ್ 2023, 23:30 IST
Last Updated 9 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಚೌಹಾಣ್‌ ಅವರನ್ನು ನರೇಂದ್ರ ಮೋದಿ ಅವರಿಗೆ ಪ್ರತಿಸ್ಪರ್ಧಿಯನ್ನಾಗಿ ಬಿಂಬಿಸುವ ಪ್ರಯತ್ನವನ್ನು ಆ ಪಕ್ಷದ ಕೆಲವು ನಾಯಕರೇ ದಶಕದ ಹಿಂದೆ ಮಾಡಿದ್ದರು.

‘ಗುಜರಾತ್‌ ಮಾದರಿ’ಗೆ ಪ್ರತಿಯಾಗಿ ಮಧ್ಯಪ್ರದೇಶದ ಅಭಿವೃದ್ಧಿಯನ್ನು ಮುನ್ನೆಲೆಗೆ ತಂದಿದ್ದರು. ನಂತರ ನರೇಂದ್ರ ಮೋದಿ ಪ್ರಧಾನಿಯಾದರು. ಆದರೆ, ಈಗ ಚೌಹಾಣ್‌ ಅವರು ಟಿಕೆಟ್‌ಗಾಗಿ ಕಣ್ಣೀರು ಸುರಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಸಲದ ಚುನಾವಣೆಯಲ್ಲಿ ಅಳೆದು ತೂಗಿ ಪಕ್ಷ ಅವರಿಗೆ ಟಿಕೆಟ್‌ ನೀಡಿದೆ. ಅವರಿಗೆ ಟಿಕೆಟ್‌ ಸಿಕ್ಕಿದ್ದು ಸೋಮವಾರ ಪ್ರಕಟವಾದ ನಾಲ್ಕನೇ ಪಟ್ಟಿಯಲ್ಲಿ!

ಮಧ್ಯಪ್ರದೇಶದಲ್ಲಿ ಬಿಜೆಪಿ ಪಾಲಿಗೆ ಈಗ ಚೌಹಾಣ್‌ ಅವರೇ ದೊಡ್ಡ ಸಮಸ್ಯೆ. ನಾಲ್ಕು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಒಬಿಸಿ ನಾಯಕನನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪಕ್ಷ ಬಿಂಬಿಸಿಲ್ಲ. ಅವರನ್ನು ಸಂಪೂರ್ಣ ಕಡೆಗಣಿಸಿದರೆ ಒಬಿಸಿ ಮತ ಕೈಕೊಡಬಹುದು ಎಂಬ ಭೀತಿಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಇದ್ದಾರೆ. ಚೌಹಾಣ್‌ ಕಾರಣಕ್ಕೆ 2018ರ ಚುನಾವಣೆಯಲ್ಲೇ ಮತದಾರರು ಬಿಜೆಪಿಗೆ ಸೋಲಿನ ರುಚಿ ತೋರಿಸಿದ್ದರು. ಕಾಂಗ್ರೆಸ್‌ ಸರ್ಕಾರ ರಚನೆಯಾಗಿತ್ತು. ನಂತರ ಕಾಂಗ್ರೆಸ್‌ನ ಶಾಸಕರನ್ನು ಸೆಳೆದುಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಚೌಹಾಣ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. 19 ವರ್ಷಗಳ ಆಡಳಿತದ ನಂತರ ಬಿಜೆಪಿ ಹಾಗೂ ಚೌಹಾಣ್‌ ವಿರುದ್ಧ ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿದೆ. ಕೇಂದ್ರ ಸಚಿವರನ್ನು ಹಾಗೂ ಸಂಸದರನ್ನು ಕಣಕ್ಕೆ ಇಳಿಸುವ ಮೂಲಕ ಬಿಜೆಪಿಯು ಈ ಅಲೆಯನ್ನು ತಗ್ಗಿಸುವ ಪ್ರಯತ್ನ ಮಾಡಿದೆ. ಕಳೆದ ಏಳು ತಿಂಗಳಲ್ಲಿ ಮೋದಿ ಅವರು ಏಳು ರ‍್ಯಾಲಿಗಳಲ್ಲಿ ಭಾಷಣ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.  

ರಾಜ್ಯದಲ್ಲಿ ಉಚಿತ ಘೋಷಣೆ ಮತ್ತು ಭರವಸೆಗಳನ್ನು ನೀಡಲು ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕರ್ನಾಟಕದ ಮಾದರಿಯಲ್ಲೇ ಮಧ್ಯಪ್ರದೇಶದಲ್ಲಿ ಹಲವು ಗ್ಯಾರಂಟಿಗಳನ್ನು ಕಾಂಗ್ರೆಸ್‌ ಘೋಷಿಸಿದೆ. ಚುನಾವಣೆಗೆ ಮುನ್ನ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲ. ಮಹಿಳೆಯರನ್ನು ಗುರಿಯಾಗಿಸಿಕೊಂಡು ಚೌಹಾಣ್‌ ಹಲವು ಯೋಜನೆಗಳ ಜಾರಿ ಮಾಡಿದ್ದಾರೆ. ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗಾಗಿಯೇ ರಾಜ್ಯ ಸರ್ಕಾರ ₹16,000 ಕೋಟಿ ಮೀಸಲಿಟ್ಟಿದೆ. ಅಲ್ಲದೆ, ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲ ಸೇರಿದಂತೆ ದೇವಸ್ಥಾನಗಳನ್ನು ನಿರ್ಮಿಸಲು, ಪುನರ್‌ನಿರ್ಮಾಣ ಮಾಡಲು ಮುಖ್ಯಮಂತ್ರಿಯವರು ₹3,000 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ. 

ಬುಡಕಟ್ಟು, ಒಬಿಸಿ, ಮಹಿಳಾ ಮತಗಳನ್ನು ಸೆಳೆಯಲು ‘ಕೈ’ ‘ಕಮಲ’ ಪಾಳಯ ಹರಸಾಹಸ ಮಾಡಿವೆ. ಮತ ಸೆಳೆಯಲು ಎಎಪಿ ಹಾಗೂ ಬಿಎಸ್‌ಪಿ ತೀವ್ರ ಕಸರತ್ತು ನಡೆಸುತ್ತಿವೆ.  

ಕಾಂಗ್ರೆಸ್ ಪರ ಪ್ರಿಯಾಂಕಾ ಗಾಂಧಿ ಮತ್ತು ಅವರ ಸಹೋದರ ರಾಹುಲ್ ಗಾಂಧಿ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಜೂನ್‌ನಲ್ಲಿ ಕಾಂಗ್ರೆಸ್ ಪ್ರಚಾರ ಆರಂಭಿಸಿದ ಪ್ರಿಯಾಂಕಾ ಗಾಂಧಿ ಆ ಬಳಿಕ ಮೂರು ರ‍್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಕಮಲನಾಥ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಲವು ಕಡೆಗಳಲ್ಲಿ ರ‍್ಯಾಲಿಗಳನ್ನು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT