ಮುಂಬೈ (ಪಿಟಿಐ): ರಾಜ್ಯ ಕೋವಿಡ್–19 ಕಾರ್ಯಪಡೆಯ ಶಿಫಾರಸಿನ ಅನ್ವಯ ಆರ್ಥಿಕತೆಯ ಮೇಲೆ ಕನಿಷ್ಠ ಪರಿಣಾಮ ಬೀರುವಂತಹ ಲಾಕ್ಡೌನ್ ಅನುಷ್ಠಾನಕ್ಕೆ ಯೋಜನೆಯನ್ನು ಸಿದ್ಧಪಡಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು, ಆರೋಗ್ಯ ಸಚಿವ ರಾಜೇಶ್ ಟೊಪೆ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಮೀಸಲಿಟ್ಟಿರುವ ಹಾಸಿಗೆ, ಆಮ್ಲಜನಕ ವ್ಯವಸ್ಥೆ, ಔಷಧಿ ಮತ್ತು ಇತರ ಮೂಲ ಸೌಕರ್ಯಗಳ ಕುರಿತು ಸಭೆಯಲ್ಲಿ ಮುಖ್ಯಮಂತ್ರಿ ಪರಿಶೀಲನೆ ನಡೆಸಿದರು.
ಲಾಕ್ಡೌನ್ ಘೋಷಿಸಿದ ನಂತರ ಜನರಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗಬಾರದು. ಈ ಸಂಬಂಧ, ಅಧಿಕಾರಿಗಳು ವಿವರವಾದ ಯೋಜನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ತಿಳಿಸಿದ್ದಾರೆ.
‘ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ 40 ಸಾವಿರ ಹೊಸ ಸೋಂಕು ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ’ ಎಂದು ಕೋವಿಡ್ ಕಾರ್ಯಪಡೆ ಕಳವಳ ವ್ಯಕ್ತಪಡಿಸಿದೆ.
‘2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದೇ ದಿನದಲ್ಲಿ 24,619 ಸೋಂಕು ಪ್ರಕರಣ ವರದಿಯಾಗಿತ್ತು. ಈ ವರ್ಷ ಮಾರ್ಚ್ 27ರಂದು ರಾಜ್ಯದಲ್ಲಿ 35,726 ಹೊಸ ಪ್ರಕರಣ ವರದಿಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಈ ಸಂಖ್ಯೆ 40,000ಕ್ಕೆ ತಲುಪಬಹುದು’ ಎಂದು ಕಾರ್ಯಪಡೆ ಸದಸ್ಯರು ತಿಳಿಸಿದ್ದಾರೆ.
ಹೊಸ ಸೋಂಕು ಪ್ರಕರಣಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣವಾದ ಲಾಕ್ಡೌನ್ ಜಾರಿಗೆ ತರುವಂತೆ ಕಾರ್ಯಪಡೆ ಇದೇ ವೇಳೆ ಶಿಫಾರಸು ಮಾಡಿದೆ.