ಕೋಲ್ಕತ್ತ : ಭಾರತದ ಅತೀ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಅಧಃಪತನಕ್ಕೆ ಇಳಿದಿರುವುದನ್ನು ಕಂಡು ತುಂಬಾ ಆಘಾತವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳ ಎದುರಲ್ಲೇ ಗ್ಯಾಂಗ್ಸ್ಟರ್ ಅತೀಕ್ ಅಹಮದ್ ಮತ್ತು ಅವರ ಸಹೋದ ಅಶ್ರಫ್ ಅಹಮದ್ ಅವರನ್ನು ಹತ್ಯೆ ಮಾಡಲಾಗಿದ್ದು, ಈ ಹತ್ಯೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ‘ಲಜ್ಜೆಗೆಟ್ಟ ಅರಾಜಕತೆ ಕಂಡು ಆಘಾತಕ್ಕೋಳಗಾಗಿದ್ದೇನೆ. ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಕಾನೂನನ್ನು ಕೈಗೆತ್ತಿಕೊಂಡಿದ್ದಲ್ಲದೇ ಮಾಧ್ಯಮದವರು ಮತ್ತು ಪೊಲೀಸರ ಎದುರೇ ಒಂಚೂರು ವಿಚಲಿತರಾಗದೆ ಹತ್ಯೆ ಮಾಡಿದ್ದಾರೆ. ಇಂತಹ ಕಾನೂನುಬಾಹಿರ ಕೃತ್ಯಗಳಿಗೆ ನಮ್ಮ ಸಂವಿಧಾನದಲ್ಲಿ ಸ್ಥಾನವಿಲ್ಲ‘ ಎಂದು ಬರೆದುಕೊಂಡಿದ್ದಾರೆ.
I am shocked by the brazen anarchy and total collapse of law & order in Uttar Pradesh.
— Mamata Banerjee (@MamataOfficial) April 16, 2023
It is shameful that perpetrators are now taking the law in their own hands, unfazed by the police and media presence.
Such unlawful acts have no place in our constitutional democracy.
ಶನಿವಾರ ರಾತ್ರಿ ವೈದ್ಯಕೀಯ ತಪಾಸಣೆಗಾಗಿ ಗ್ಯಾಂಗ್ಸ್ಟರ್ ಅತೀಕ್ ಅಹಮದ್ ಮತ್ತು ಅವರ ಸಹೋದ ಅಶ್ರಫ್ ಅಹಮದ್ ಅವರನ್ನು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಪ್ರಯಾಗರಾಜ್ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿ ಹೇಳಿಕೆ ಪಡೆಯುವಂತೆ ಮುಂದೆ ಬಂದ ಮೂವರು ನೇರವಾಗಿ (ಅತೀಕ್ ಅಹ್ಮದ್) ತಲೆಗೇ ಗುಂಡಿಟ್ಟು ಹತ್ಯೆ ಮಾಡಿದ್ದರು.
ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು ನಡು ರಸ್ತೆಯಲ್ಲೇ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಅತಿಕ್ ಅಹಮದ್ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದರು. ಎರಡು ದಿನಗಳ ಹಿಂದೆ ಅತಿಕ್ ಅಹಮದ್ ಮಗ ಅಸಾದ್ ಅಹಮದ್ ಅವರನ್ನು ಎನ್ಕೌಂಟರ್ ಮಾಡಲಾಗಿತ್ತು. ಮಗನ ಸಾವಿನ ಬೆನ್ನಲ್ಲೇ ತಂದೆ ಅತಿಕ್ ಅಹಮದ್ ಹತ್ಯೆಯಾಗಿದೆ. ಈ ಘಟನೆಗಳ ಬೆನ್ನಲ್ಲೇ ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.