ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ: ಸರಕು ಸಾಗಣೆ ವಾಹನಗಳ ಸಂಚಾರ ಆರಂಭ

Published 21 ಮೇ 2023, 14:38 IST
Last Updated 21 ಮೇ 2023, 14:38 IST
ಅಕ್ಷರ ಗಾತ್ರ

ಇಂಫಾಲ್ (ಪಿಟಿಐ): ಹಿಂಸಾಚಾರ ಪೀಡಿತ ಮಣಿಪುರದ ನಾಗರಿಕರಿಗೆ ಆಹಾರದ ಅಭಾವ ತಲೆದೋರದಂತೆ ವಿಶೇಷ ಭದ್ರತೆಯೊಂದಿಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. 

ರಾಷ್ಟ್ರೀಯ ಹೆದ್ದಾರಿ 37ರ ಮೂಲಕ ಆಹಾರ ಪದಾರ್ಥಗಳನ್ನು ಹೊತ್ತ ವಾಹನಗಳು ಇಂಫಾಲ್‌ಗೆ ಪ್ರವೇಶಿಸುತ್ತಿವೆ. ಮೇ 15ರಿಂದಲೇ ಭಾರತೀಯ ಸೇನೆ, ಅಸ್ಸಾಂ ರೈಫಲ್‌ ಪಡೆ, ಕೇಂದ್ರ ಭದ್ರತಾ ಪಡೆಗಳು ಹಾಗೂ ಪೊಲೀಸರ ಭದ್ರತೆಯೊಂದಿಗೆ ಈ ವಾಹನಗಳ ಸಂಚಾರ ಆರಂಭಗೊಂಡಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. 

ಹೆದ್ದಾರಿ ಮೂಲಕ ಸಾಗುವ ಈ ವಾಹನಗಳ ಮೇಲೆ ವೈಮಾನಿಕ ಕಣ್ಗಾವಲು ಇಡಲಾಗಿದೆ. ಇವುಗಳ ಜೊತೆಗೆ ಕ್ಷಿಪ್ರ ಕಾರ್ಯಪಡೆ ತಂಡಗಳು ಸಂಚರಿಸುತ್ತಿವೆ ಎಂದು ತಿಳಿಸಿದ್ದಾರೆ.

ಮಣಿಪುರದಲ್ಲಿ ಸಂಭವಿಸಿದ ಹಿಂಸಾಚಾರದ ಪರಿಣಾಮ ಕಣಿವೆ ಪ್ರದೇಶದಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಭಯದ ವಾತಾವರಣ ಸೃಷ್ಟಿಯಾಗಿದ್ದರಿಂದ ಸರಕು ಸಾಗಣೆದಾರರು ಹಿಂದಡಿ ಇಟ್ಟಿದ್ದರು. ಇದರಿಂದ ಅಗತ್ಯ ವಸ್ತುಗಳ ಪೂರೈಕೆ ಕಡಿಮೆಯಾಗುತ್ತಿದ್ದು, ಆಹಾರದ ಸಮಸ್ಯೆ ಉಲ್ಬಣಿಸಲು ಸಾಧ್ಯತೆ ಹೆಚ್ಚಿತ್ತು. ಹಾಗಾಗಿ, ಅಗತ್ಯ ವಸ್ತುಗಳ ಸಾಗಣೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಿಂಸಾಚಾರದಲ್ಲಿ 70 ಮಂದಿ ಮೃತಪಟ್ಟಿದ್ದಾರೆ. ಜನಜೀವನ ಸಹಜ ಸ್ಥಿತಿಗೆ ಮರಳಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದು, ಸೇನೆ ಮತ್ತು ಅರೆಸೇನಾ ಪಡೆಯ 10 ಸಾವಿರ ಯೋಧರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT