ಮುಂಬೈ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಂಗೆ ಅವರ ಆರೋಗ್ಯ ಹದಗೆಟ್ಟಿದ್ದು, ಇಂದು (ಮಂಗಳವಾರ) ಅವರನ್ನು ಬೀಡ್ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರಾಠ ಸಮುದಾಯದ ಮೀಸಲಾತಿಯ ಬೇಡಿಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅವರು ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಪ್ರವಾಸ ನಡೆಸುತ್ತಿದ್ದು, ಈ ನಡುವೆ ಆರೋಗ್ಯ ಕೈಕೊಟ್ಟಿದೆ.
ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಶ್ವಾಸವಿದೆ ಎಂದು ಭಾನುವಾರ ರಾತ್ರಿ ಹೇಳಿದ್ದ ಜರಂಗೆ, ಡಿಸೆಂಬರ್ 24ರ ಒಳಗೆ ತಮ್ಮ ಬೇಡಿಕೆ ಪೂರೈಸಬೇಕು ಎಂದು ಪುನರುಚ್ಚರಿಸಿದ್ದರು.
ಶಿವ್ಬಾ ಸಂಘಟನೆಯ ಸಂಸ್ಥಾಪಕರೂ ಆಗಿರುವ ಜರಂಗೆ, ಮೀಸಲಾತಿಗಾಗಿ ಆಗ್ರಹಿಸಿ ಆಗಸ್ಟ್ 29ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಶಿಂದೆ ಅವರು ಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ ನಂತರ ಸೆಪ್ಟೆಂಬರ್ 14ರಂದು ಸತ್ಯಾಗ್ರಹ ಕೈಬಿಟ್ಟಿದ್ದರು.