ನವದೆಹಲಿ(ಪಿಟಿಐ): ಅಪರಾಧ ಹಿನ್ನೆಲೆಯುಳ್ಳ ಜನಪ್ರತಿನಿಧಿಗಳ ಸದಸ್ಯತ್ವ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಹಾಗೂ ಇತರ ಅರ್ಜಿದಾರರ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದಸಂವಿಧಾನ ಪೀಠವು ತೀರ್ಪು ಕಾಯ್ದಿರಿಸಿತು.
ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಎ.ಎಂ.ಖನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಹಾಗೂ ಇಂದೂ ಮಲ್ಹೋತ್ರ ಅವರು ಈ ಪೀಠದಲ್ಲಿದ್ದಾರೆ.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ‘ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಕೋರ್ಟ್ನ ಉದ್ದೇಶ ಒಳ್ಳೆಯದು.ಆದರೆ, ಶಾಸನ ರೂಪಿಸುವ ಅಧಿಕಾರ ವ್ಯಾಪ್ತಿಯಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’ ಎಂದರು.
‘ಜನಪ್ರತಿನಿಧಿ ತಪ್ಪಿತಸ್ಥನೆಂದು ಸಾಬೀತಾಗುವವರೆಗೆ ಆತನಿಗೆ ಕೋರ್ಟ್ ಯಾವುದೇ ಷರತ್ತು ವಿಧಿಸುವಂತಿಲ್ಲ. ಮತ ಹಾಕುವ ಹಕ್ಕಿನಂತೆ ಸ್ಪರ್ಧಿಸುವ ಹಕ್ಕನ್ನೂ ಆತ ಹೊಂದಿರುತ್ತಾನೆ’ ಎಂದು ವಾದ ಮಂಡಿಸಿದರು.
‘ಶಾಸಕಾಂಗದಲ್ಲಿ ಹಸ್ತಕ್ಷೇಪ ಮಾಡಬೇಕೆನ್ನುವ ಉದ್ದೇಶ ಕೋರ್ಟ್ಗೆ ಇಲ್ಲ. ಆದರೆ, ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಪೂರ್ವಾಪರ ತಿಳಿಯುವ ಹಕ್ಕು ಮತದಾರರಿಗೆ ಇದೆ’ ಎಂದು ಪೀಠ ತನ್ನ ಅಭಿಪ್ರಾಯ ತಿಳಿಸಿತು.