ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಈಶಾನ್ಯ ರಾಜ್ಯಗಳಲ್ಲಿ ಮಿಜೋರಾಂ ಮೊದಲ ರಾಜ್ಯವಾಗಲಿದೆ. ಕಾಂಗ್ರೆಸ್ ಭಾರತದ ವೈವಿಧ್ಯತೆ ಮತ್ತು ಸಾಮರ್ಥ್ಯಗಳನ್ನು ಆಚರಿಸುತ್ತದೆಯೇ ಹೊರತು ಅದರ ದೌರ್ಬಲ್ಯಗಳನ್ನಲ್ಲ’ ಎಂದು ಅವರು ತಿಳಿಸಿದರು.
‘ಒಂದು ರಾಷ್ಟ್ರ, ಒಂದು ಭಾಷೆ, ಒಂದು ಸಂಹಿತೆ ಮತ್ತು ಒಂದು ಸಂಸ್ಕೃತಿಯನ್ನು ಕಾಂಗ್ರೆಸ್ ವಿರೋಧಿಸುತ್ತದೆ. ನಾವು ಏಕರೂಪತೆಗೆ ವಿರುದ್ಧವಾಗಿದ್ದೇವೆ. ನಮ್ಮ ವೈವಿಧ್ಯತೆಯನ್ನು ಉಳಿಸಿಕೊಂಡು ನಾವು ಒಂದಾಗಬಹುದು ಎಂದು ನಾವು ನಂಬುತ್ತೇವೆ’ ಎಂದು ತರೂರ್ ಪ್ರತಿಪಾದಿಸಿದರು.
ಪ್ರಸುತ್ತ ರಾಜ್ಯ ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ನಿರುದ್ಯೋಗವು ಒಂದಾಗಿದೆ. ಉದ್ಯೋಗ ಹುಡುಕುತ್ತಿರುವ ಮಿಜೋರಾಂ ಯುವಕರಲ್ಲಿ ಶೇ 23ಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗ ಸೃಷ್ಟಿಸುವ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ತರೂರ್ ವಾಗ್ದಾಳಿ ನಡೆಸಿದರು.
ಮಿಜೋರಾಂ ವಿಧಾನಸಭೆ ಚುನಾವಣೆಯು ನವೆಂಬರ್ 7 ರಂದು ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.