ಪಣಜಿ: ಗೋವಾದ ರಾಜಧಾನಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ತೆರೆದ ಗುಂಡಿಗೆ ಆಯತಪ್ಪಿ ಬಿದ್ದು 21 ವರ್ಷದ ಬೈಕ್ ಸವಾರ ಸೋಮವಾರ ಮೃತಪಟ್ಟಿದ್ದಾರೆ.
ಆಯುಷ್ ಹಾಲರ್ಕಂರ್ ಮೃತ ಯುವಕ ಎಂದು ಗುರುತಿಸಲಾಗಿದೆ. ಪಣಜಿಯ ಮಾಲಾ ಎಂಬ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಕಾಮಗಾರಿಗಾಗಿ ತೆರೆದ ಗುಂಡಿಗೆ ಯಾವುದೇ ಎಚ್ಚರಿಕೆ ಫಲಕ ಹಾಕಿರಲಿಲ್ಲ. ಹೀಗಾಗಿ ಬೈಕ್ ಸವಾರನಿಗೆ ಅದು ಕಾಣದೆ ಬಿದ್ದಿದ್ದಾರೆ’ ಎಂದು ಸ್ಥಳೀಯರು ಹೇಳಿದ್ದಾರೆ.
’ಈ ಪ್ರದೇಶದಲ್ಲಿ ಸಮರ್ಪಕ ಬೀದಿ ದೀಪದ ವ್ಯವಸ್ಥೆ ಇಲ್ಲ. ಇದರಿಂದ ಬೈಕ್ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಯುವಕ ಮೃತಪಟ್ಟ ನಂತರ ಇಲ್ಲಿ ಎಚ್ಚರಿಕೆಯ ಫಲಕವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಳವಡಿಸಿದರು. ಬೀದಿ ದೀಪ ಅಳವಡಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ’ ಎಂದು ಪ್ರತ್ಯಕ್ಷದರ್ಶಿ ಹೇಳಿರುವುದಾಗಿ ವರದಿಯಾಗಿದೆ.
ಅಪಘಾತಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ವಿರೋಧ ಪಕ್ಷ ತೀವ್ರವಾಗಿ ಟೀಕಿಸಿದೆ. ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವ್ ಅವರು ಮಾತನಾಡಿ, ‘ಮೃತ ಕುಟುಂಬಕ್ಕೆ ಹೊಸ ವರ್ಷ ದುರ್ಘಟನೆಯೊಂದಿಗೆ ಆರಂಭವಾದಂತಾಗಿದೆ. ಇದು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಆರೋಪಿಸಿದ್ದಾರೆ.
‘ಇದಕ್ಕೆ ಯಾವುದೇ ಕ್ಷಮೆ ಇಲ್ಲ. ತಪ್ಪಿತಸ್ಥರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಆಗ್ರಹಿಸಿದ್ದಾರೆ.