ನವದೆಹಲಿ:ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಚರ್ಚೆ ಆರಂಭವಾಗುವುದಕ್ಕಿಂತ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳು ಪಾಕಿಸ್ತಾನದವರಂತೆ ಮಾತನಾಡುತ್ತಿವೆ ಎಂದಿದ್ದಾರೆ.
ಬಿಜೆಪಿ ಸಂಸದರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರುಪೌರತ್ವ ಮಸೂದೆಯನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು. ಧಾರ್ಮಿಕ ದೌರ್ಜನ್ಯಕ್ಕೊಳಗಾಗಿವಲಸೆ ಹೋದಜನರಿಗೆ ಇದು ಶಾಶ್ವತ ಪರಿಹಾರ ನೀಡುತ್ತದೆ. ಆದರೆ ವಿಪಕ್ಷದಲ್ಲಿರುವ ಕೆಲವರು ಪೌರತ್ವ ಮಸೂದೆ ಬಗ್ಗೆ ಪಾಕಿಸ್ತಾನ ಹೇಳಿದ್ದ ರೀತಿಯಲ್ಲಿಯೇ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ರಾಜ್ಯಸಭೆಯಲ್ಲಿ ಪೂರ್ಣ ಬಹುಮತದಿಂದ ಮಸೂದೆ ಅಂಗೀಕಾರ ಆಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆಯು ಸೋಮವಾರ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿತ್ತು.ಲೋಕಸಭೆಯಲ್ಲಿ ಹಾಜರಿದ್ದ 391 ಸದಸ್ಯರ ಪೈಕಿ ಮಸೂದೆ ಪರವಾಗಿ 293 ಸದಸ್ಯರು ಮತ ಹಾಕಿದರೆ, ಮಸೂದೆ ವಿರುದ್ಧವಾಗಿ 82 ಮತಗಳು ಚಲಾವಣೆಯಾಗಿದ್ದವು.
ಪೌರತ್ವ(ತಿದ್ದುಪಡಿ)ಮಸೂದೆ 2019ರ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ವಲಸೆ ಬಂದಿರುವ ಮುಸ್ಲಿಮೇತರ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದ ನಿರಾಶ್ರಿತರಿಗೆ ಭಾರತೀಯ ನಾಗರಿಕತ್ವ ಸಿಗಲಿದೆ.