ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಸಾಧಿಸಿ ಮೂರನೇ ಅವಧಿಗೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಇದು ಕೇವಲ ನನ್ನ ನಂಬಿಕೆ ಮಾತ್ರವಲ್ಲದೇ, ದೇಶದ ಜನರು ಹಾಗೂ ಅನೇಕ ರಾಜಕೀಯ ವಿಶ್ಲೇಷಕರ ನಂಬಿಕೆಯೂ ಆಗಿದೆ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ' ಎಂದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಪೈಪೋಟಿಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಂಗ್ ಉತ್ತರಿಸಿದ್ದಾರೆ.
ನಗರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆಯಲ್ಲಿ ಪಾಲ್ಗೊಂಡು, ‘ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ಕೃತಿಯಲ್ಲಿನ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ವಿಶ್ವದಾದ್ಯಂತ ಇರುವ ಎಲ್ಲಾ ಭಾರತೀಯರು ನಂಬುತ್ತಾರೆ ಹಾಗೂ ಆರಾಧಿಸುತ್ತಾರೆ. ವಾಲ್ಮೀಕಿ ಲೋಕನಾಯಕ ಹಾಗೂ ಅವತಾರ ಪುರುಷ ಎಂದು ಉಲ್ಲೇಖಿಸಿ ಮಾತನಾಡಿದ್ದಾರೆ.