ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭವಿಲ್ಲದ ಕಂಪನಿಗಳಿಂದಲೂ ದೇಣಿಗೆ, ಬಿಜೆಪಿಯ ಚಂದಾ ವಸೂಲಿಗೆ ನಿದರ್ಶನ:ಕಾಂಗ್ರೆಸ್‌

Published 4 ಏಪ್ರಿಲ್ 2024, 14:28 IST
Last Updated 4 ಏಪ್ರಿಲ್ 2024, 14:28 IST
ಅಕ್ಷರ ಗಾತ್ರ

ನವದೆಹಲಿ: ನಷ್ಟ ಅನುಭವಿಸಿರುವ ಅಥವಾ ಶೂನ್ಯ ಲಾಭವಿದ್ದ ಸುಮಾರು 33 ಕಂಪನಿಗಳೂ ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ ₹ 430 ಕೋಟಿಗೂ ಹೆಚ್ಚು ಮೊತ್ತವನ್ನು ಬಾಂಡ್‌ಗಳ ರೂಪದಲ್ಲಿ ದೇಣಿಗೆ ನೀಡಿವೆ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ ನೀಡಿದ್ದ ಸ್ಪಷ್ಟ ಸೂಚನೆಯ ನಂತರವೂ ಚುನಾವಣಾ ಬಾಂಡ್‌ ಯೋಜನೆ ಜಾರಿಗೊಳಿಸಿದ್ದ ಬಿಜೆಪಿಯ ಚಾಣಾಕ್ಷ ನಡೆಯ ಹಿಂದೆ, ಬಲವಂತವಾಗಿಯಾದರೂ ದೇಣಿಗೆ ಸಂಗ್ರಹಿಸುವ ಆ ಪಕ್ಷದ ಮನಃಸ್ಥಿತಿಯನ್ನು ಕಾಣಬಹುದಾಗಿದೆ ಎಂದು ವ್ಯಾಖ್ಯಾನಿಸಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಎಕ್ಸ್’ನಲ್ಲಿ ಈ ಆರೋಪ ಮಾಡಿದ್ದಾರೆ. ಪೂರಕವಾಗಿ ‘ನಷ್ಟದಲ್ಲಿದ್ದ 33 ಕಂಪನಿಗಳು ₹ 582 ಕೋಟಿ ದೇಣಿಗೆ ನೀಡಿದ್ದವು. ಇದರಲ್ಲಿ ಶೇ 75ರಷ್ಟು ಬಿಜೆಪಿಗೆ ಸಂದಿದೆ’ ಎಂಬ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ.

ಚುನಾವಣಾ ಬಾಂಡ್‌ ಹಗರಣದ ಇನ್ನಷ್ಟು ಮುಖಗಳು ದಿನಕಳೆದಂತೆ ಬಯಲಾಗುತ್ತಿವೆ. ಉಲ್ಲೇಖಿತ 33 ಕಂಪನಿಗಳ ಒಟ್ಟು ನಿವ್ವಳ ನಷ್ಟ ₹ 1 ಲಕ್ಷ ಕೋಟಿ. ಇವುಗಳಲ್ಲಿ 16 ಕಂಪನಿಗಳು ಶೂನ್ಯ ಲಾಭ ಮಾಡಿದ್ದವು ಎಂದು ವರದಿಯನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.

ಚುನಾವಣಾ ಬಾಂಡ್‌ ಯೋಜನೆ ಜಾರಿಯಾದಾಗಲೇ ಆರ್‌ಬಿಐ, ಈ ಯೋಜನೆಯು ಮುಂದೆ ಅಕ್ರಮ ರೀತಿಯಲ್ಲಿ ಹಣ ವರ್ಗಾವಣೆಗೆ ದಾರಿ ಮಾಡಿಕೊಡಬಹುದು ಎಂದು ಆತಂಕ ವ್ಯಕ್ತಪಡಿಸಿತ್ತು. ಆದರೆ, ಚಂದಾ ವಸೂಲಿ ಮಾಡುವ ಬಿಜೆಪಿಯ ಇರಾದೆಯು ಈ ಯೋಜನೆಯನ್ನು ಜಾರಿಗೊಳಿಸಲು ಪ್ರೇರಕವಾಗಿತ್ತು. ಅಂದು ಆರ್‌ಬಿಐ ಸೂಚನೆಯನ್ನು ಕಡೆಗಣಿಸಿದ್ದಕ್ಕೆ, ಇಂದು ದೇಶವು ಬೆಲೆ ತೆರುತ್ತಿದೆ ಎಂದು ಜೈರಾಮ್‌ ರಮೇಶ್‌ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT