ರಾಯಪುರ: ಛತ್ತೀಸ್ಗಢ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಇಬ್ಬರು ನಾಗರೀಕರನ್ನು ನಕ್ಸಲೀಯರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ದುಲ್ಹೇದ್ ಗ್ರಾಮದ ನಿವಾಸಿಗಳಾದ ಸೋಧಿ ಮತ್ತು ನಂದಾ ಎಂದು ಗುರುತಿಸಲಾಗಿದೆ. ಚಿಂತಗುಫಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಪ್ರದೇಶದಲ್ಲಿ ಇನ್ನು ಮುಂದೆ ಕೊಲೆಗಳನ್ನು ಮಾಡಲಾಗುವುದು ಎಂದು ನಕ್ಸಲರು ಎಚ್ಚರಿಕೆ ನೀಡಿದ್ದರಿಂದ ಅಲ್ಲಿಗೆ ಭದ್ರತಾ ಹಾಗೂ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ತಮ್ಮ ನೆಲೆಗಳನ್ನು ಕಳೆದುಕೊಂಡು ಹತಾಶರಾಗಿರುವ ನಕ್ಸಲೀಯರು ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಾರೆ. ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳು ಸಾಮಾನ್ಯ ಜನರನ್ನು ತಲುಪುವುದನ್ನು ಅವರು ಬಯಸುತ್ತಿಲ್ಲ, ಆದ್ದರಿಂದ ಇಂತಹ ಕೃತ್ಯಗಳಿಗೆ ಇಳಿದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.