ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NCP vs NCP: ನಿಮ್ಮ ಚಿಹ್ನೆಯೊಂದಿಗೆ ಗುರುತಿಸಿಕೊಳ್ಳಿ: ಅಜಿತ್ ಬಣಕ್ಕೆ SC ತಾಕೀತು

Published 14 ಮಾರ್ಚ್ 2024, 10:59 IST
Last Updated 14 ಮಾರ್ಚ್ 2024, 10:59 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP) ಇಬ್ಭಾಗವಾದ ನಂತರ, ಮೂಲ ಎನ್‌ಸಿಪಿ ಎಂದು ಅಜಿತ್ ಪವಾರ್ ಬಣವನ್ನು ಚುನಾವಣಾ ಆಯೋಗ ಪರಿಗಣಿಸಿದೆ. ಆದರೆ ಪಕ್ಷದ ಹಿರಿಯ ನಾಯಕ ಶರದ್ ಪವಾರ್ ಅವರ ಭಾವಚಿತ್ರವನ್ನು ಚುನಾವಣಾ ಪ್ರಚಾರದಲ್ಲಿ ಬಳಸುತ್ತಿರುವ ಕುರಿತು ಪ್ರಶ್ನೆಗಳು ಎದ್ದಿವೆ.

‘ಶರದ್ ಪವಾರ್ ಅವರ ಹೆಸರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಳಸುವುದಿಲ್ಲ’ ಎಂದು ಅಜಿತ್ ಪವಾರ್ ಬಣವು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ವಿಶ್ವನಾಥನ್‌ ಅವರಿದ್ದ ಪೀಠಕ್ಕೆ ಗುರುವಾರ ಸಲ್ಲಿಸಿದೆ.

ಶರದ್ ಪವಾರ್ ಅವರ ಚಿತ್ರ ಬಳಸಿ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಸಲ್ಲಿಕೆಯಾಗಿದ್ದ ದೂರಿಗೆ ಪ್ರತಿಯಾಗಿ ಅಜಿತ್ ಬಣಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು. 

‘ಚುನಾವಣೆಯಲ್ಲಿ ಸ್ಪರ್ಧಿಸಲು ಅಜಿತ್ ಪವಾರ್ ಬಣವು ಪಕ್ಷದ ಮೂಲ ಚಿಹ್ನೆ ಗಡಿಯಾರವನ್ನೇ ಪಡೆದಿದ್ದು, ಅಲ್ಲಿ ಯಾವುದೇ ಗೊಂದಲವಿಲ್ಲ. ನಿಮ್ಮದು ಈಗ ಪ್ರತ್ಯೇಕ ರಾಜಕೀಯ ಪಕ್ಷವಾಗಿದೆ. ಅವರೊಂದಿಗೆ ಇರುವುದಿಲ್ಲ ಎಂಬ ಆಯ್ಕೆ ನಿಮ್ಮದೇ ಆಗಿದೆ. ಹೀಗಾಗಿ ಅದಕ್ಕೆ ನೀವು ಬದ್ಧರಾಗಿ. ಶರದ್‌ ಪವಾರ್ ಅವರ ಚಿತ್ರವನ್ನೇಕೆ ಬಳಸುತ್ತೀರಿ? ನಿಮ್ಮದೇ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಳ್ಳಿ’ ಎಂದು ಪೀಠವು ಅಜಿತ್ ಬಣಕ್ಕೆ ಸಲಹೆ ನೀಡಿದೆ.

ಶರದ್ ಪವಾರ್ ಚಿತ್ರ ಬಳಕೆಗೆ ತಕರಾರು

ಶರದ್ ಪವಾರ್ ಬಣದ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ‘ಅಜಿತ್ ಪವಾರ್ ಬಣವು ತಮಗೆ ಆಯೋಗ ನೀಡಿದ ಗಡಿಯಾರ ಚಿತ್ರದ ಜತೆಗೆ ಶರದ್ ಪವಾರ್ ಅವರ ಚಿತ್ರವನ್ನೂ ಬಳಸಿ ಪೋಸ್ಟರ್‌ಗಳನ್ನು ಮಾಡಿದೆ. ಇದು ಸ್ಪಷ್ಟವಾದ ಪೇಟೆಂಟ್ ವಂಚನೆಯಾಗಿದೆ’ ಎಂದು ಪೀಠದ ಗಮನಕ್ಕೆ ತಂದರು.

‘ಪ್ರಜಾಪ್ರಭುತ್ವದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯಬೇಕಾದ್ದು ಅತ್ಯಗತ್ಯ. ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಅವರಲ್ಲಿದ್ದರೆ, ಅವರ ಸ್ವಸಾಮರ್ಥ್ಯದ ಆಧಾರದಲ್ಲಿ ಚುನಾವಣೆ ಎದುರಿಸಲಿ’ ಎಂದರು.

ಈ ಕುರಿತಂತೆ ಅಜಿತ್ ಬಣದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮಣೀಂದರ್ ಸಿಂಗ್ ಅವರನ್ನು ಪ್ರಶ್ನಿಸಿದ ಪೀಠ, ‘ನಿಮಗೆ ಆತ್ಮವಿಶ್ವಾಸವಿದ್ದಲ್ಲಿ ನೀವೇಕೆ ಶರದ್ ಪವಾರ್ ಅವರ ಚಿತ್ರ ಬಳಸುತ್ತಿದ್ದೀರಿ?’ ಎಂದು ನ್ಯಾ. ಸೂರ್ಯಕಾಂತ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಿಂಗ್, ‘ಇದನ್ನು ಪಕ್ಷ ಮಾಡಿಲ್ಲ. ಬದಲಿಗೆ ಯಾರೋ ಬೆಂಬಲಿಗರು ರಚಿಸಿರುವ ಸಾಧ್ಯತೆ ಇದೆ’ ಎಂದರು.

‘ಹಾಗಿದ್ದರೆ ಇದಕ್ಕೆ ಹೊಣೆ ಯಾರು? ನಿಮ್ಮ ಬಣದ ಯಾರೊಬ್ಬರೂ ಶರದ್ ಪವಾರ್ ಅವರ ಭಾವಚಿತ್ರ ಬಳಸುವುದಿಲ್ಲ ಎಂದು ಪೀಠಕ್ಕೆ ವಾಗ್ದಾನ ಮಾಡಿದ್ದೀರಿ. ಹಾಗಿದ್ದರೆ ನಿಮ್ಮ ಕಾರ್ಯಕರ್ತರ ಮೇಲೆ ಹಿಡಿತ ಹೊಂದುವುದು ನಿಮ್ಮ ಹೊಣೆಯಲ್ಲವೇ’ ಎಂದು ಖಾರವಾಗಿ ಪೀಠವು ಪ್ರಶ್ನಿಸಿತು.

ಗಡಿಯಾರ ಚಿಹ್ನೆಗೆ ಸಿಂಘ್ವಿ ಆಕ್ಷೇಪ

ಅಜಿತ್ ಪವಾರ್ ಬಣಕ್ಕೆ ಗಡಿಯಾರ ಚಿಹ್ನೆ ನೀಡಿರುವ ಕೇಂದ್ರ ಚುನಾವಣಾ ಆಯೋಗದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಕೀಲ ಸಿಂಘ್ವಿ, ’ಈ ಚಿಹ್ನೆಯು ಶರದ್ ಪವಾರ್ ಅವರೊಂದಿಗೆ ಬೆರೆತಿದೆ. ಹೀಗಾಗಿ ಅಜಿತ್ ಬಣಕ್ಕೆ ಬೇರೊಂದು ಚಿಹ್ನೆ ನೀಡಬೇಕು’ ಎಂದು ವಾದಿಸಿದರು.

ಸಿಂಘ್ವಿ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಅಜಿತ್ ಬಣವು ಬೇರೆ ಚಿಹ್ನೆಯನ್ನೇಕೆ ಪಡೆಯಬಾರದು’ ಎಂದು ಕೇಳಿತು. ಜತೆಗೆ ಅಜಿತ್ ಬಣಕ್ಕೆ ಗಡಿಯಾರವನ್ನು ಚಿಹ್ನೆಯಾಗಿ ನೀಡಿದ್ದಕ್ಕೆ ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ ಎಂದೂ ಪೀಠ ಹೇಳಿತು.

‘ಒಂದೊಮ್ಮೆ ಗಡಿಯಾರ ಚಿಹ್ನೆ ಬಳಕೆಯ ಆದೇಶ ರದ್ದಾದಲ್ಲಿ, ಅದೂ ಚುನಾವಣೆಯ ಮಧ್ಯದಲ್ಲೇ ಆದರೆ ನಂತರ ಏನು ಮಾಡುವಿರಿ? ಹೀಗಾಗಿ ಬೇರೊಂದು ಚಿಹ್ನೆಯನ್ನು ಆಯ್ಕೆ ಮಾಡುವುದು ಮತ್ತು ಅದನ್ನು ಚುನಾವಣೆಯಲ್ಲಿ ಬಳಸುವ ನಿಟ್ಟಿನಲ್ಲಿ ಯೋಚಿಸಿ’ ಎಂದೂ ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT