ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಂಪನಿಯೊಂದರಿಂದ ₹ 150 ಕೋಟಿ ಮೌಲ್ಯದ ಚುನಾವಣಾ ಬಾಂಡ್ಗಳನ್ನು ಪಡೆದ ಬಳಿಕ ಟೆಲಿಕಾಂ ನೀತಿಯನ್ನು ಬದಲಾಯಿಸಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಗುರುವಾರ ಆರೋಪಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನೀತಿಯಲ್ಲಿ ಈ ರೀತಿ ಬದಲಾವಣೆ ಮಾಡಿದ್ದರ ಲಾಭ ಯಾರಿಗೆ ದೊರೆತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. 2ಜಿ ಒಂದು ಹಗರಣವಾಗಿದ್ದರೆ, ಇದು ಏನು’ ಎಂದು ಅವರು ಪ್ರಶ್ನಿಸಿದ್ದಾರೆ.
ಭಾರ್ತಿ ಗ್ರೂಪ್ ಈ ಮೊತ್ತವನ್ನು ದೇಣಿಗೆ ನೀಡಿದೆ ಎಂದು ಸೂಚಿಸುವ ವರದಿಯ ಚಿತ್ರವನ್ನು ಒವೈಸಿ ಪೋಸ್ಟ್ನಲ್ಲಿ ಟ್ಯಾಗ್ ಮಾಡಿದ್ದಾರೆ.