ನವದೆಹಲಿ: ತೀನ್ ಮೂರ್ತಿ ಭವನದ ಆವರಣದಲ್ಲಿರುವ ನೆಹರು ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿಯ(ಎನ್ಎಂಎಂಎಲ್) ಹೆಸರನ್ನು ಪ್ರಧಾನ ಮಂತ್ರಿ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ ಎಂದು ಬದಲಿಸಲಾಗಿದೆ. ಕೇಂದ್ರದ ಈ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ತೀನ್ ಮೂರ್ತಿ ಭವನವು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರ ಲಾಲ್ ನೆಹರು ಅವರ ಅಧಿಕೃತ ನಿವಾಸವಾಗಿತ್ತು.
ಎನ್ಎಂಎಂಎಲ್ನ ವಿಶೇಷ ಸಭೆಯಲ್ಲಿ ಹೆಸರು ಬದಲಾವಣೆಯ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಸ್ಕೃತಿ ಇಲಾಖೆ ತಿಳಿಸಿದೆ. ಸೊಸೈಟಿಯ ಉಪಾಧ್ಯಕ್ಷರೂ ಆಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಹೆಸರು ಬದಲಾವಣೆಯ ಪ್ರಸ್ತಾವವನ್ನು ಸಿಂಗ್ ಸ್ವಾಗತಿಸಿದ್ದು, ಈ ಸಂಸ್ಥೆಯಲ್ಲಿ ನೆಹರೂಯಿಂದ ನರೇಂದ್ರ ಮೋದಿವರೆಗೆ ಎಲ್ಲ ಪ್ರಧಾನಮಂತ್ರಿಗಳ ಕೊಡುಗೆಗಳು ಮತ್ತು ವಿವಿಧ ಸವಾಲುಗಳಿಗೆ ಅವರು ಪ್ರತಿಕ್ರಿಯಿಸಿದ ರೀತಿಯನ್ನು ಇಲ್ಲಿ ಪ್ರದರ್ಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
‘ಪ್ರಧಾನಮಂತ್ರಿಗಳನ್ನು ಒಂದು ಸಂಸ್ಥೆ ಇದ್ದಂತೆ ಎಂದು ಬಣ್ಣಿಸಿರುವ ಸಿಂಗ್, ವಿವಿಧ ಪ್ರಧಾನಮಂತ್ರಿಗಳ ಪಯಣವನ್ನು ಕಾಮನಬಿಲ್ಲಿನ ವಿವಿಧ ಬಣ್ಣಗಳಿಗೆ ಹೋಲಿಕೆ ಮಾಡಿದ್ದಾರೆ. 'ಕಾಮನಬಿಲ್ಲು ಸುಂದರವಾಗಿ ಕಾಣಬೇಕೆಂದರೆ ಎಲ್ಲ ಬಣ್ಣಗಳಿಗೂ ಪ್ರಾತಿನಿಧ್ಯ ಇರಬೇಕು’ ಎಂದು ಅವರು ತಿಳಿಸಿದ್ದಾರೆ.
‘ಹೊಸ ನಿರ್ಣಯದಂತೆ ಎಲ್ಲ ಮಾಜಿ ಪ್ರಧಾನಮಂತ್ರಿಗಳ ಗೌರವಾರ್ಥವಾಗಿ ಹೊಸ ಹೆಸರನ್ನು ನೀಡಲಾಗಿದೆ. ಇದು ಪ್ರಜಾಸತ್ತಾತ್ಮಕ ವಿಷಯವಾಗಿದೆ’ ಎಂದು ಅವರು ಹೇಳಿದ್ದಾರೆ.
ಕೇಂದ್ರದ ಈ ನಿರ್ಣಯವನ್ನು ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಟೀಕಿಸಿದ್ದಾರೆ.
'ಸಣ್ಣತನ ಮತ್ತು ಪ್ರತೀಕಾರ ಮನೋಭಾವದ ಹೆಸರೇ ಮೋದಿ. 59 ವರ್ಷ ಹಳೆಯ ನೆಹರು ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿ ಜಾಗತಿಕ ವಾಸ್ತುಶಿಲ್ಪದ ಹೆಗ್ಗುರುತಾಗಿದ್ದು, ಪುಸ್ತಕಗಳು ಮತ್ತು ದಾಖಲೆಗಳ ಭಂಡಾರವಾಗಿದೆ. ಇನ್ನುಮುಂದೆ ಇದನ್ನು ಪ್ರಧಾನಮಂತ್ರಿ ಮ್ಯೂಸಿಯಂ ಮತ್ತು ಸೊಸೈಟಿ ಎಂದು ಕರೆಯಲಾಗುತ್ತದೆ. ಭಾರತೀಯ ಸಮಾಜದ ವಾಸ್ತುಶಿಲ್ಪಿಯ ಹೆಸರು ಮತ್ತು ಪರಂಪರೆಯನ್ನು ಹಾಳುಮಾಡಲು ಮಿಸ್ಟರ್ ಮೋದಿ ಏನು ಬೇಕಾದರೂ ಮಾಡುತ್ತಾರೆ ಎಂದು ಜೈರಾಂ ರಮೇಶ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.