ಶ್ರೀನಗರ: ಜಮ್ಮು–ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಕಳೆದ ವರ್ಷ ಐವರು ನಾಗರಿಕರನ್ನು ಕೊಂದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇರೆಗೆ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶಕ್ಕೆ ಪಡೆದಿದೆ.
ಕಾನೂನು ಸಂಘರ್ಷದಲ್ಲಿ ಒಳಗಾಗಿರುವ ಬಾಲಕನನ್ನು ಜಮ್ಮುವಿನ ಆರ್.ಎಸ್. ಪುರದಲ್ಲಿರುವ ಮನೆಯೊಂದರಲ್ಲಿ ಇಟ್ಟು ನಿಗಾ ವಹಿಸಲಾಗಿತ್ತು. ಆತನನ್ನು ಶನಿವಾರ ವಶಕ್ಕೆ ಪಡೆದಿರುವ ಎನ್ಐಎ, ರಜೌರಿಯಲ್ಲಿರುವ ಬಾಲ ನ್ಯಾಯ ಮಂಡಳಿ (ಜೆಜೆಬಿ) ಎದುರು ಹಾಜರುಪಡಿಸಿತು ಎಂದು ಎನ್ಐಎಯ ವಕ್ತಾರ ಮಾಹಿತಿ ನೀಡಿದ್ದಾರೆ.
ಢಾಂಗರಿ ಗ್ರಾಮದಲ್ಲಿ 2023ರ ಜನವರಿ 1ರಂದು ನಡೆದಿದ್ದ ಈ ಭಯೋತ್ಪಾದಕ ದಾಳಿಯಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಐವರು ಮೃತಪಟ್ಟಿದ್ದರು. ಅಲ್ಲದೆ, ಹಲವರು ತೀವ್ರ ಗಾಯಗೊಂಡಿದ್ದರು. ಈ ಸಂಬಂಧ ತನಿಖೆ ಕೈಗೊಂಡಿದ್ದ ಎನ್ಐಎ 2023ರ ಜನವರಿ 13ರಂದು ಮತ್ತೆ ಪ್ರಕರಣ ದಾಖಲಿಸಿಕೊಂಡಿತ್ತು.