ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, 9 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. 33 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾತ್ರಾದಿಂದ ಶಿವಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ 53 ಸೀಟುಗಳ ಬಸ್ ಮೇಲೆ ದಾಳಿ ನಡೆದಿದೆ. ದಾಳಿ ಬಳಿಕ ಬಸ್ ಆಳವಾದ ಕಂದಕಕ್ಕೆ ಉರುಳಿದೆ.
ಸಂಜೆ 6.15ರ ಸುಮಾರಿಗೆ ಪೋನಿ ಪ್ರದೇಶದ ತೆರ್ಯಾತ್ ಹಳ್ಳಿ ಬಳಿ ಘಟನೆ ನಡೆದಿದೆ.
9 ಯಾತ್ರಾರ್ಥಿಗಳು ಮೃತಪಟ್ಟು, 33 ಮಂದಿ ಗಾಯಗೊಂಡಿರುವುದನ್ನು ರಿಯಾಸಿ ಪೊಲೀಸ್ ವರಿಷ್ಠಾಧಿಕಾರಿ ಮೊಹಿತಾ ಶರ್ಮಾ ದೃಢಪಡಿಸಿದ್ದಾರೆ.
ನೆರೆಯ ರಾಜೌರಿ ಮತ್ತು ಪೂಂಚ್ಗೆ ಹೋಲಿಸಿದರೆ ರಿಯಾಸಿ ಜಿಲ್ಲೆಯಲ್ಲಿ ಅಷ್ಟಾಗಿ ಉಗ್ರರ ಉಪಟಳ ಇರಲಿಲ್ಲ. ಈ ದಾಳಿ ಬಳಿಕ ಅಲ್ಲಿಯೂ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಮುಂದಾಗಿರುವುದು ಆತಂಕಕ್ಕೆ ಈಡುಮಾಡಿದೆ.