ಹೈದರಾಬಾದ್: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ರಾಜ್ಯವಾಗಿರುವ ಕರ್ನಾಟಕದಲ್ಲಿಯೇ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ಪೂರೈಸಲು ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಬಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ. ರಾಮ ರಾವ್ ಅವರು ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ರಾಜ್ಯ ಸಾಧಿಸಿರುವ ಅಭಿವೃದ್ಧಿಯು ಹಳಿತಪ್ಪಲಿದೆ ಎಂದು ರಾಮ ರಾವ್ ಅವರು ಎಚ್ಚರಿಸಿದ್ದಾರೆ. ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದೆ.
ಕಾಂಗ್ರೆಸ್ಸಿಗೆ ಮತ ಹಾಕಿ, ಅದನ್ನು ಅಧಿಕಾರಕ್ಕೆ ತಂದಿದ್ದಕ್ಕಾಗಿ ಕರ್ನಾಟಕದ ರೈತರು ಈಗ ಪಶ್ಚಾತ್ತಾಪಪಡುತ್ತಿದ್ದಾರೆ ಎಂದು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವ್ ಹೇಳಿದ್ದಾರೆ.
‘ಖರ್ಗೆಯವರೇ, ಯಾವ ಖಾತರಿಯೂ ಇಲ್ಲ. ನಿಮ್ಮ ತವರು ರಾಜ್ಯದಲ್ಲಿ ಐದು ತಾಸು ಮಾತ್ರ ವಿದ್ಯುತ್ ಸಿಗುತ್ತಿದೆ. ನೀವು ಮತ್ತು ನಿಮ್ಮ ಪಕ್ಷವು ತೆಲಂಗಾಣದಲ್ಲಿ ಯಾವ ಸಾಧನೆ ತೋರಬಲ್ಲಿರಿ’ ಎಂದು ರಾಮ ರಾವ್ ಪ್ರಶ್ನಿಸಿದ್ದಾರೆ.