ನವದೆಹಲಿ: 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯು ರಾಜ್ಯಗಳ ಚುನಾವಣಾ ಆಯೋಗಗಳ ಜತೆ ಉನ್ನತ ಮಟ್ಟದ ಸಭೆಯನ್ನು ಮುಂದುವರೆಸಿತು.
ರಾಮನಾಥ್ ಕೋವಿಂದ್ ಅವರು ಕರ್ನಾಟಕದ ರಾಜ್ಯ ಚುನಾವಣಾ ಆಯುಕ್ತ ಬಿ. ಬಸವರಾಜು ಹಾಗೂ ಮಹಾರಾಷ್ಟ್ರದ ರಾಜ್ಯ ಚುನಾವಣಾ ಆಯುಕ್ತ ಯು.ಪಿ.ಎಸ್ ಮದನ್ ಸೇರಿದಂತೆ ಕೆಲವರೊಂದಿಗೆ ಸೋಮವಾರ ಮಾತುಕತೆ ನಡೆಸಿದ್ದಾರೆ.
ಈ ವೇಳೆ ರಾಜ್ಯ ಚುನಾವಣಾ ಆಯುಕ್ತರು, ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಸ್ಥಳೀಯ ಸಂಸ್ಥೆಗಳು, ರಾಜ್ಯ ವಿಧಾನಸಭೆ, ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಎದುರಾಗುವ ಸವಾಲುಗಳು ಸೇರಿದಂತೆ ಪರಿಹಾರದ ವಿಧಾನಗಳ ಬಗ್ಗೆಯೂ ಚರ್ಚಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆ ಮತ್ತು ರಾಜ್ಯ ವಿಧಾನ ಪರಿಷತ್ತಿನ ಚುನಾವಣೆಗಳನ್ನು ನಡೆಸುತ್ತದೆ. ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳಾದ ಪುರಸಭೆಗಳು ಹಾಗೂ ಪಂಚಾಯಿತಿಗಳಿಗೆ ಚುನಾವಣೆಗಳನ್ನು ಆಯೋಜಿಸುತ್ತದೆ.
ಸಂವಿಧಾನದ ಅಡಿಯಲ್ಲಿ ಭಾರತೀಯ ಚುನಾವಣಾ ಆಯೋಗವು ಹಾಗೂ ರಾಜ್ಯ ಚುನಾವಣಾ ಆಯೋಗವು ಪ್ರತ್ಯೇಕ ಸಂಸ್ಥೆಗಳಾಗಿವೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ‘ ಸಮಿತಿಯನ್ನು ರಚಿಸಲಾಗಿದೆ. ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆ, ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಷಯದ ಬಗ್ಗೆ ಚರ್ಚಿಸಿ ಶಿಫಾರಸು ಮಾಡಲು ಈ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ.
ಕೋವಿಂದ್ ಸಮಿತಿಯು ಕಳೆದ ವಾರವೂ ಕೆಲವು ರಾಜ್ಯ ಚುನಾವಣಾ ಆಯುಕ್ತರುಗಳ ಜತೆ ಸಂವಾದ ನಡೆಸಿತ್ತು.