ಕೋಲ್ಕತ್ತ: ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ವಿಪಕ್ಷಗಳು ಸಂಸತ್ತಿನಿಂದ ಪಲಾಯನಗೈದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಮಣಿಪುರ ವಿಷಯದಲ್ಲಿ ಚರ್ಚೆ ನಡೆಸಲು ವಿಪಕ್ಷಗಳು ಬಯಸಿರಲಿಲ್ಲ. ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಅಪಪ್ರಚಾರಕ್ಕೂ ಸೋಲಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ರಾಜ್ ಪರಿಷತ್ ಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿ ಮಾತನಾಡಿದ ಪ್ರಧಾನಿ, ಎರಡು ದಿನಗಳ ಹಿಂದೆ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನೂ ಸೋಲಿಸಿದ್ದೇವೆ. ದೇಶದಾದ್ಯಂತ ನಕಾರಾತ್ಮಕತೆ ಹರಡುವುದನ್ನೂ ಸೋಲಿಸಿದ್ದೇವೆ. ವಿರೋಧ ಪಕ್ಷಗಳು ಸದನದಿಂದ ಓಡಿ ಹೋಗಿರುವುದನ್ನು ಇಡೀ ದೇಶವೇ ನೋಡಿದೆ. ವಿಪಕ್ಷಗಳು ಮಣಿಪುರದ ಜನತೆಗೆ ದ್ರೋಹ ಬಗೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಣಿಪುರದ ವಿಷಯದ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳು ಬಯಸಿಲ್ಲ. ಎಲ್ಲವನ್ನೂ ರಾಜಕೀಯಗೊಳಿಸುವುದರಲ್ಲಿ ಮುಳುಗಿತ್ತು. ಅವರಿಗೆ ಜನರ ಕಷ್ಟ, ನೋವುಗಳ ಬಗ್ಗೆ ಕಾಳಜಿ ಇರಲಿಲ್ಲ. ಅದಕ್ಕಾಗಿಯೇ ಅವಿಶ್ವಾಸ ನಿರ್ಣಯ ಮಂಡಿಸಿ ಚರ್ಚೆಯಿಂದ ದೂರ ಉಳಿದು, ರಾಜಕೀಯ ಮಾಡಿದ್ದರು ಎಂದು ಆರೋಪಿಸಿದರು.