ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿಯವರು ಒಡಿಶಾದಲ್ಲಿ 270ಕ್ಕೂ ಅಧಿಕ ರೈಲ್ವೆ ಯೋಜನೆಗಳಿಗೆ ಮಂಗಳವಾರ ಚಾಲನೆ ನೀಡಿದ್ದಾರೆ.
ಅವುಗಳಲ್ಲಿ ಹೊಸ ರೈಲು ಮಾರ್ಗ, ಸಿಗ್ನಲಿಂಗ್ ವ್ಯವಸ್ಥೆ, ಗೂಡ್ ಶೆಡ್ ಹಾಗೂ ವಿಶಾಖಪಟ್ಟಣ ಮತ್ತು ಭುವನೇಶ್ವರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಹ ಸೇರಿದೆ.
ಇದು ರಾಜ್ಯದ ಮೂರನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಾಗಿದ್ದು. ಮೊದಲ ಎರಡು ಪುರಿ-ಹೌರಾ ಮತ್ತು ಪುರಿ-ರೂರ್ಕೆಲಾ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ದೇಶದಾದ್ಯಂತ ವಿವಿಧ ರೈಲ್ವೆ ಯೋಜನೆಗಳು ಸೇರಿ ಒಡಿಶಾದ ಯೋಜನೆಗಳಿಗೂ ಅಹಮದಾಬಾದ್ನಿಂದ ವರ್ಚುವಲ್ ಆಗಿ ಮೋದಿ ಚಾಲನೆ ನೀಡಿದ್ದಾರೆ.
ಭದ್ರಕ್-ನೆರಗುಂಡಿ ನಡುವಿನ ಮೂರನೇ ಮಾರ್ಗದ ₹234 ಕೋಟಿ ವೆಚ್ಚದ ಹರಿದಾಸಪುರ-ಬೈರಿ ವಿಭಾಗದ (16.8 ಕಿಮೀ) ರೈಲು ಯೋಜನೆ, ₹131 ಕೋಟಿ ವೆಚ್ಚದ ಕೋರಾಪುರ-ರಾಯಗಡ ಡಬ್ಲಿಂಗ್ ಯೋಜನೆ, ₹167 ಕೋಟಿ ವೆಚ್ಚದ ಸಿಂಗಾಪುರ ರಸ್ತೆ-ರಾಯಗಡ ವಿಭಾಗದ ಮಾರ್ಗ (9.2 ಕಿ.ಮೀ) ಮತ್ತು ₹31 ಕೋಟಿ ವೆಚ್ಚದ ಕೋಟಾವ್ಲಾಸ-ಕೋರಾಪುಟ್ ದ್ವಿಪಥ ಯೋಜನೆಗೆ ಚಾಲನೆ ನೀಡಲಾಗಿದೆ.
162 ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆಗಳು, 41 'ಒಂದು ನಿಲ್ದಾಣ ಒಂದು ಉತ್ಪನ್ನ' (ಒಎಸ್ಒಪಿ) ಸ್ಟಾಲ್ಗಳು, 50 ಸೌರಶಕ್ತಿ ಚಾಲಿತ ಕೇಂದ್ರಗಳು, ಐದು ಗೂಡ್ಸ್ ಶೆಡ್ಗಳು, ನಾಲ್ಕು ಆಟೊ ಸಿಗ್ನಲಿಂಗ್ ವ್ಯವಸ್ಥೆಗಳು, ಗತಿ ಶಕ್ತಿ ಟರ್ಮಿನಲ್, ಜನೌಷಧಿ ಕೇಂದ್ರ ಮತ್ತು ರೈಲ್ ಕೋಚ್ ರೆಸ್ಟೋರೆಂಟ್ ಅನ್ನು ಮೋದಿ ಉದ್ಘಾಟಿಸಿದರು.