ನವದೆಹಲಿ: ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಈ ಪೈಕಿ ಲೋಕಸಭೆ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದಿದ್ದ ಆರೋಪಿ ಡಿ. ಮನೋರಂಜನ್ ಅವರ ಸಹಪಾಠಿ ಬಾಗಲಕೋಟೆಯ ಸಾಯಿಕೃಷ್ಣ ಮತ್ತು ಉತ್ತರ ಪ್ರದೇಶ ಮೂಲದ ಇನ್ನೊಬ್ಬನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಪ್ರಶ್ನಿಸಿದೆ ಎಂದು ಮೂಲಗಳು ತಿಳಿಸಿವೆ.
ಈಗ ಅಳಿಸಿ ಹಾಕಲಾಗಿರುವ 'ಭಗತ್ ಸಿಂಗ್ ಫ್ಯಾನ್ ಕ್ಲಬ್' ಹೆಸರಿನ ಫೇಸ್ಬುಕ್ ಪುಟದಲ್ಲಿ ದಾಳಿಗೂ ಮುನ್ನ ಶಂಕಿತರು ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಡಿ. ಮನೋರಂಜನ್ ಡೈರಿಯಲ್ಲಿ ಹೆಸರಿರುವ ಬಾಗಲಕೋಟೆಯ ಸಾಯಿಕೃಷ್ಣ ಅವರನ್ನು ದೆಹಲಿ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದರು. ಬೆಂಗಳೂರಿನ ಬಿಇಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದಲ್ಲದೇ, ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು ಎಂದು ಗೊತ್ತಾಗಿದೆ.