ಪಟ್ನಾ: ಪಿತೃಪಕ್ಷದ ಅಂಗವಾಗಿ ಸಾಮಾಜಿಕ ಕಾರ್ಯಕರ್ತ ಚಂದನ್ ಸಿಂಗ್ ಎಂಬುವರು ಪತ್ರಕರ್ತೆ ಗೌರಿ ಲಂಕೇಶ್ ಹೆಸರಿನಲ್ಲಿ ಗಯಾದಲ್ಲಿ ಪಿಂಡ ಪ್ರದಾನ ಮಾಡಿದ್ದಾರೆ.
ಅಲ್ಲದೇ, 1965ರ ಯುದ್ಧದಲ್ಲಿ ಹುತಾತ್ಮರಾದ ಯೋಧ, ಮಾರ್ಷಲ್ ಅರ್ಜುನ್ ಸಿಂಗ್, ದೇಶದ ವಿವಿಧೆಡೆ ಸ್ವಚ್ಛತಾ ಕಾರ್ಯದ ಕರ್ತವ್ಯದಲ್ಲಿರುವಾಗ ಸಾವನ್ನಪ್ಪಿರುವ 1,700 ಕಾರ್ಮಿಕರಿಗೆ, ಸಾಮೂಹಿಕ ಹಲ್ಲೆಯಿಂದಾಗಿ ಪ್ರಾಣ ಕಳೆದುಕೊಂಡಿರುವವರ ಹೆಸರಿನಲ್ಲಿಯೂ ಅವರು ಇಲ್ಲಿ ಪಿಂಡ ಪ್ರದಾನ ಮಾಡಿ ಗಮನ ಸೆಳೆದಿದ್ದಾರೆ.
‘ನನ್ನ ತಂದೆ ಸುರೇಶ್ ನಾರಾಯಣ ಕೂಡ ಪತ್ರಕರ್ತರಾಗಿದ್ದರು. ಜಗತ್ತಿನಲ್ಲಿ ವಿವಿಧ ಕಾರಣಗಳಿಂದಾಗಿ ಪ್ರಾಣ ಕಳೆದುಕೊಳ್ಳುವವರ ಹೆಸರಿನಲ್ಲಿ ಅವರು 2001ರಿಂದ ಪಿಂಡ ಪ್ರದಾನಮಾಡುತ್ತಿದ್ದರು.ಈ ಧಾರ್ಮಿಕ ವಿಧಿಯನ್ನು ಮುಂದುವರಿಸುವಂತೆ ಅವರು ಕೊನೆಯುಸಿರೆಳೆಯುದಕ್ಕೂ ಮುನ್ನ ನನಗೆ ಹೇಳಿದ್ದರು ಎಂದು ಚಂದನ್ ಸಿಂಗ್ ಹೇಳಿದರು.
‘ನನ್ನ ತಂದೆಯಂತೆ ಗೌರಿ ಲಂಕೇಶ್ ಸಹ ಪತ್ರಕರ್ತರಾಗಿದ್ದರು. ಹೀಗಾಗಿ ಅವರ ಹೆಸರಿನಲ್ಲಿ ಪಿಂಡ ಪ್ರದಾನ ಮಾಡುವುದು ಸೂಕ್ತ ಎನಿಸಿದ್ದರಿಂದ ಈ ಧಾರ್ಮಿಕ ವಿಧಿಯನ್ನು ನೆರವೇರಿಸಿದೆ. ಇತ್ತೀಚೆಗೆ ಗೋರಖ್ಪುರದ ಆಸ್ಪತ್ರೆಯಲ್ಲಿ ಅಸುನೀಗಿದ 60 ಜನ ಮಕ್ಕಳ ಹೆಸರಿನಲ್ಲಿಯೂ ಪಿಂಡ ಪ್ರದಾನ ಮಾಡಿರುವೆ’ ಎಂದೂ ಹೇಳಿದರು.